Sunday 29 October 2017

Bhava Spandana - 28

ಭಾವ ಸ್ಪಂದನ by “ತ್ರಿವೇಣಿ ತನಯ

ಭೂಷಣ -ಜ್ಞಾನದಾಭರಣ

ಎಲ್ಲಾ ಗೊತ್ತೆನ್ನುವ ಸ್ವಭಾವ ಸಂಕುಚಿತ,
ಗಮ್ಯವದರದು ಖಂಡಿತ ---ಪ್ರಪಾತ,
ಜ್ಞಾನವದು ಎಂದೂ ಮಾಸದ ಆಭರಣ,
ಸೋಸಿ ಕೇಳುವ ಕಿವಿಗಳಿರೆ ಭೂಷಣ.

ಭ್ರಮಾಧೀನರು

ಇಲ್ಲದ್ದನ್ನು ನಂಬುವ ನಾಸ್ತಿಕವಾದಿ ,
ಇರುವುದನ್ನು ಅನುಭವಿಸದ ಆಸ್ತಿಕವಾದಿ,
ಇಬ್ಬರೂ ನಾಟಕದ ಭ್ರಮೆಗೆ ಒಳಗಾದವರೇ,
ಒಳಗಣ್ಣು ತೆರೆಯದೆ ಹರಿಯದು ಭ್ರಮೆಯ ಪೊರೆ.

ಮುಚ್ಚಿಟ್ಟ ದೀಪ

ದೇವರು ಎಲ್ಲರೊಳಗಿರುವ ಮುಚ್ಚಿಟ್ಟ ದೀಪ,
ಅವನಿರದೇ ಜೀವ ಏನು ಮಾಡಬಲ್ಲದು ಪಾಪ,
ದೇಹವೇ ನಾನೆಂಬುವವಗೆ ತನ್ನರಿವೇ ಇಲ್ಲ,
ಅಂಥವಗೆ ಸಿಗಲಾರ ಅವ ಲಕುಮೀನಲ್ಲ.

ಸ್ವಭಾವದನಾವರಣ

ಇನ್ನೊಬ್ಬರ ತಪ್ಪುಗಳ ಹುಡುಕುವ ಬುದ್ಧಿವಂತ,
ತನ್ನ ದೋಷಗಳ ಮುಚ್ಚಿಡುವದೇ ಧಾವಂತ,
ಮುಚ್ಚುವುದು ಬಿಚ್ಚುವುದು ನೀನು ಮಾಡುತ್ತಿಲ್ಲ,
ಸ್ವಭಾವದ ಪ್ರದರ್ಷನ ಆಗುತಿದೆ ತಾನೇ ಎಲ್ಲ.

ಅಪಾತ್ರ ಕೊಡುಗೆ

ಸಾಗರದ ಮೇಲೆ ಸುರಿದ ಮಳೆ,
ತೃಪ್ತನಿಗೆ ಕೊಟ್ಟ ಆಹಾರದ ತೊಳೆ,
ಶ್ರೀಮಂತಗೆ ದೇಣಿಗೆ-ಹಗಲು ದೀವಟಿಗೆ,
ಎಲ್ಲವೂ ಅರ್ಥಹೀನ ಅಪಾತ್ರ ಕೊಡುಗೆ.
[Contributed by Shri Govind Magal]

Monday 23 October 2017

Balipadyami: Vamana Avatara ಬಲಿಪಾಡ್ಯಮೀ: ವಾಮನ ಅವತಾರ

ಬಲಿಪಾಡ್ಯಮೀ: ವಾಮನ ಅವತಾರ

ಭಗವಂತನ ಹತ್ತು ಅವತಾರಗಳಲ್ಲಿ ಎರಡು ಅವತಾರಗಳು ಒಂದೇ ವಂಶದ ಇಬ್ಬರು ಮಹಾನ್ ವ್ಯಕ್ತಿಗಳನ್ನು ಉದ್ಧರಿಸಿದ ಅವತಾರಗಳು... ಒಂದು ನರಸಿಂಹ ಮತ್ತೊಂದು ವಾಮನ... ಭಕ್ತ ಪ್ರಹ್ಲಾದನನ ಭಕ್ತಿಯ ಕರೆಗೆ ಓಗೊಟ್ಟ ರೂಪ ನರಸಿಂಹಾವತಾರವಾದರೆ ಅವನ ಮೊಮ್ಮಗ ಬಲಿಯನ್ನು ಉದ್ಧರಿಸಿದ ರೂಪ ವಾಮನಾವತಾರ...

ಇದರ ವಿಶೇಷತೆಯನ್ನು ನಾವು ನಿತ್ಯ ಸಂಧ್ಯಾವಂದನೆಯಲ್ಲಿ ಜಪಿಸುವ ಗಾಯತ್ರೀ ಮಂತ್ರದಿಂದ ಕೂಡ ತಿಳಿಯಬಹುದಾಗಿದೆ...

ವಿಶ್ವಾಮಿತ್ರ ಗಾಯತ್ರಿ ಮಂತ್ರದಲ್ಲಿ ಒಟ್ಟು ಹತ್ತು ಶಬ್ದಗಳಿವೆ... ಅಲ್ಲಿ ಹತ್ತು ಶಬ್ದಗಳೇ ಯಾಕಿವೆ ?... ಯಾಕಿವೆಯಂದರೆ ಇವು  ಸ್ಪಷ್ಟವಾಗಿ ಭಗವಂತನ ದಶಾವತಾರಗಳನ್ನು ಹೇಳುವ ಶಬ್ದಗಳಾಗಿವೆ. ಅದು ವಿಶೇಷ..

ಗಾಯತ್ರಿ ಮಂತ್ರದ ಆ ಹತ್ತು ಶಬ್ದಗಳು : ತತ್, ಸವಿತುಃ, ವರೇಣ್ಯಂ, ಭರ್ಗಃ, ದೇವಸ್ಯ. ಧೀಮಹಿ, ಧಿಯಃ, ಯಃ, ನಃ, ಪ್ರಚೋದಯಾತ್...

ತತ್ : ಮತ್ಸ್ಯಾವತಾರ
ಸವಿತುಃ : ಕೂರ್ಮಾವತಾರ
ವರೇಣ್ಯಂ : ವರಾಹಾವತಾರ
ಭರ್ಗಃ : ನರಸಿಂಹಾವತಾರ
ದೇವಸ್ಯ : ವಾಮನಾವತಾರ
ಧೀಮಹಿ : ಪರಶುರಾಮಾವತಾರ
ಧಿಯಃ : ರಾಮಾವತಾರ
ಯಃ : ಕೃಷ್ಣಾವತಾರ
ನಃ : ಬುದ್ಧಾವತಾರ
ಪ್ರಚೋದಯಾತ್ : ಕಲ್ಕ್ಯಾವತಾರ

ಈಗ ಗಾಯತ್ರಿಗೆ ಸಂಬಂಧಪಟ್ಟ ವಿಷಯ ಹೀಗಿದೆ :  ಗಾಯತ್ರಿ ಮಂತ್ರ ಅಂದರೆ ಮೂರ ಪಾದದ, ಒಂದೊಂದು ಪಾದದಲ್ಲೂ ಎಂಟೆಂಟು ಅಕ್ಷರಗಳಿರುವ ಗ್ರಾಯತ್ರೀ ಛಂದಸ್ಸಿನ ಒಂದು ಮಂತ್ರ...

ಯಾವುದೇ ಮಂತ್ರವಾಗಲಿ ಉಪಾಸನೆಯಲ್ಲಿ ನಾವು ಮೊದಲು ನೆನೆಯಬೇಕಾದದ್ದು, ಋಷಿ-ಛಂದಸ್ಸು-ದೇವತೆಯನ್ನು... ಅಂದರೆ ಆ ಮಂತ್ರವನ್ನು ಕಂಡ ಋಷಿ ಯಾರು ? ಆ ಮಂತ್ರ ಯಾವ ಛಂದಸ್ಸಿನಲ್ಲಿದೆ ? ಮತ್ತು ಆ ಮಂತ್ರ ಪ್ರತಿಪಾದ್ಯವಾದ ದೇವತೆ ಯಾರು ? ಯಾವುದೇ ಮಂತ್ರ ಪಠಿಸುವ ಮೊದಲು ಈ ಮೂರನ್ನು ನೆನಪಿಸಿಕೊಂಡ ಮೇಲೆಯೇ ಮಂತ್ರಜಪ...

ಸದ್ಯ ನಾವು ನಿತ್ಯ ಜಪಿಸುವ ಗಾಯತ್ರಿ ಮಂತ್ರವನ್ನು ಕಂಡ ಋಷಿ : ವಿಶ್ವಾಮಿತ್ರ ; ಛಂದಸ್ಸು: ಗಾಯತ್ರೀ; ದೇವತೆ : ಸೂರ್ಯನ ಅಂತರ್ಗತವಾದ ನಾರಾಯಣ ರೂಪ.. ಅದೇ ಸವಿತೃನಾರಾಯಣ ಅಥವಾ ಸೂರ್ಯನಾರಾಯಣ ರೂಪ...

ಯಾವುದೇ ಮಂತ್ರಕ್ಕೆ ಹೆಸರು ಬರುವುದು ಇದೇ ಮೂರು ಕಾರಣಗಳಿಂದ... ಮಂತ್ರವನ್ನು ಕಂಡ ಋಷಿಯಿಂದ ಅಥವಾ ಮಂತ್ರದ ಛಂದಸ್ಸಿನಿಂದ ಅಥವಾ ಆ ಮಂತ್ರ ಪ್ರತಿಪಾದ್ಯ ದೇವತೆಯಿಂದ...

ಎಂಟೆಂಟು ಅಕ್ಷರದ ಮೂರು ಪಾದಗಳುಳ್ಳ ಎಲ್ಲ ಮಂತ್ರಗಳೂ ಗಾಯತ್ರೀ ಮಂತ್ರಗಳೇ ಆದರೂ ವಿಶ್ವಾಮಿತ್ರ ಗಾಯತ್ರಿ ಮಾತ್ರ ಗಾಯತ್ರೀ ಮಂತ್ರ ಎಂದು ಕರೆಯಲ್ಪಡುವುದಕ್ಕೆ ಮುಖ್ಯ ಕಾರಣ ಈ ಮಂತ್ರಕ್ಕಿರುವ ವೈಶಿಷ್ಟ್ಯ ಹಾಗೂ "ಛಂದಸ್ಸಿ"ನಿಂದಲೇ ಗುರುತಿಸಲ್ಪಟ್ಟ ಮಂತ್ರ ಇದಾದದ್ದರಿಂದ...

ಈ ಗಾಯತ್ರಿಗೂ ಇಂದು ನಾವು ಬಲಿಪಾಡ್ಯಮೀ ದಿನದಂದು ನೆನೆಯುವ ವಾಮನ ರೂಪಕ್ಕೂ ಒಂದು ವಿಶೇಷವಾದ ಸಂಬಂಧ ಇದೆ... ಗಾಯತ್ರೀ ಮಂತ್ರದಲ್ಲಿ ಒಟ್ಟು ಇಪ್ಪತ್ತನಾಲ್ಕು ಅಕ್ಷರಗಳಿವೆ ಅಂತಾರೆ... ಆದರೆ ಎಣಿಸಿ ನೋಡಿ ! ಇರುವುದು ಇಪ್ಪತ್ತಮೂರೇ ಅಕ್ಷರಗಳು...

ತತ್ ಸವಿತುರ್ವರೇಣ್ಯಂ |
ಭರ್ಗೋದೇವಸ್ಯ ಧೀಮಹಿ |
ಧಿಯೋಯೋನಃ ಪ್ರಚೋದಯಾತ್ ||

7+8+8 = 23 (ತ್ - ಅರ್ಧ ಮಾತ್ರೆ ಅದನ್ನು ಪರಿಗಣಿಸುವಂತಿಲ್ಲ;
ಸಂಸ್ಕೃತ ಭಾಷೆಯಲ್ಲಿ ವರ್ಣಗಳನ್ನು ಅಂದರೆ ಅಕ್ಷರಗಳನ್ನು "ಮಾತ್ರೆಗಳು" ಅಂತ ಕರೆಯುತ್ತಾರೆ)...

ಮೊದಲ ಸಾಲು ಎಂಟಕ್ಷರ ಆಗಬೇಕೆಂದರೆ "ವರೇಣ್ಯಂ" ಶಬ್ದವನ್ನು ಜಪದಲ್ಲಿ ಬಿಡಿಸಿ ಉಚ್ಚರಿಸಬೇಕು "ವರೇಣಿಯಂ" ಅಂತ...
ಇದನ್ನು ಯಾಕೆ ಬಿಡಿಸಬೇಕು ? ಅದಕ್ಕೂ ಕಾರಣ ಉಂಟು...

ಯಾವುದೇ ವೇದ ಮಂತ್ರ ಕೂಡ ಅದು ನಿರ್ಮಾಣಗೊಂಡ ಒಂದೊಂದು ಅಕ್ಷರದಲ್ಲೂ ಒಂದೊಂದು ವಿಶೇಷತೆ ಅಡಗಿರುತ್ತದೆ... ಅದರಿಂದಲೇ ವೇದ ಮಂತ್ರಗಳನ್ನು ಜ್ಞಾನರಾಶಿಗಳು ಅಂತ ಕರೆದದ್ದು... "ವೇದ" means Knowledge.... ಋಗ್ವೇದದಲ್ಲಿ ಒಟ್ಟಾರೆ ಹತ್ತುಸಾವಿರ ಮಂತ್ರಗಳಿವೆ ಮತ್ತು ಒಟ್ಟು 4,32,000 ಅಕ್ಷರಗಳಿವೆ... ಇಷ್ಟು ಅಕ್ಷರಗಳಿಗೂ ಭಗವಂತನ ಒಂದೊಂದು ರೂಪಗಳಿವೆ.. ಅದರಿಂದ ಒಂದೊಂದು ಅಕ್ಷರಕ್ಕೂ ಆಳವಾದ ಅರ್ಥಗಳಿವೆ...

ಹಾಗೆಯೇ, ಗಾಯತ್ರೀ ಮಂತ್ರದಲ್ಲಿರುವ ಒಂದೊಂದು ಅಕ್ಷರವೂ ಕೂಡ ಭಗವಂತನ ಒಂದೊಂದು ರೂಪವನ್ನು ಹೇಳುತ್ತದೆ... ಯಾವುವು ಭಗವಂತನ ಆ ರೂಪಗಳು ? ಅವು ನಾವು ಆಚಮನ ಮಂತ್ರದಲ್ಲಿ ಹೇಳುವ
ಕೇಶವಾದಿ ಚತುರ್ವಿಂಶತಿ (24) ರೂಪಗಳು...

ತ(ತ್)- ಕೇಶವ; ಸ-ನಾರಾಯಣ; ವಿ-ಮಾಧವ; ತು-ಗೋವಿಂದ; ವ-ವಿಷ್ಣು ; ರೇ- ಮಧುಸೂದನ ; ಣ್ಯಂ-ತ್ರಿವಿಕ್ರಮ... ಈಗ ಸಿಕ್ಕಿತು ನೋಡಿ ವಾಮನಾವತಾರದ ಅರ್ಥ.. "ಣ್ಯಂ" ಅಕ್ಷರವನ್ನು "ಣಿಯಂ" ಎಂದು ಎರಡು ಅಕ್ಷರವಾಗಿ ಬಿಡಿಸಿಕೊಂಡರೆ "ಣಿ-ತ್ರಿವಿಕ್ರಮ; ಯಂ-ವಾಮನ" ಎಂಬ ಎರಡು ಭಗವಂತನ ರೂಪಗಳನ್ನು ಹೇಳುವ ಅಕ್ಷರಗಳಾಗುತ್ತವೆ...

ಎಂಥಾ ಅದ್ಭುತ ನೋಡಿ ! ತ್ರಿವಿಕ್ರಮ ಅಂತ ಭಗವಂತನ ಬೇರೊಂದು ರೂಪವಿಲ್ಲ...‌ ವಾಮನನೇ ಬೆಳೆದು ತ್ರಿವಿಕ್ರಮನಾದದ್ದು...‌ ಅದರಿಂದ "ಣ್ಯಂ" ಅಕ್ಷರವನ್ನು ಬಿಡಿಸಿಕೊಂಡು "ಣಿಯಂ" ಅಂತ ಎರಡು ಅಕ್ಷರ ಮಾಡಿಕೊಂಡಾಗ ಗಾಯತ್ರೀ ಮಂತ್ರದ ಮೂರು ಪಾದದಲ್ಲೂ 8+8+8= 24 ಅಕ್ಷರಗಳಾಗುತ್ತವೆ... ಈಗ ಇದು Perfect ಆಗಿ 24 ಅಕ್ಷರಗಳ ಗಾಯತ್ರೀ ಮಂತ್ರವಾಯಿತು... ಅದರಿಂದ ಜಪದಲ್ಲಿ ನಮ್ಮ ಮಂತ್ರೋಚ್ಚಾರ "ತತ್ ಸವಿತುರ್ವರೇಣಿಯಂ" ಅಂತ ಆಗಬೇಕು... ಅದು ಏಕೆ ಎಂಬುದೂ ಕೂಡ ಈಗ ಅರ್ಥವಾಯಿತು...
ಇದನ್ನೆಲ್ಲ ಹೀಗೆ ತಿಳಿಸಿಕೊಟ್ಟವರು ನಮ್ಮ ಪೂಜ್ಯ ಆಚಾರ್ಯರು... ಇದು ನಿಮ್ಮೆಲ್ಲರಿಗೂ ತಿಳಿದ ವಿಷಯವೇ ಆಗಿದೆ..‌‌. ಆದರೂ ಬಲಿಪಾಡ್ಯಮೀ ದಿನದ ವಿಶೇಷವಾಗಿ ಮೆಲುಕುಹಾಕುವುದಕ್ಕಷ್ಟೇ ಈ ಪ್ರಯತ್ನ ... ನಮಸ್ಕಾರ.
- By B S Harish

Sunday 22 October 2017

Bhava Spandana - 27

ಭಾವ ಸ್ಪಂದನ by “ತ್ರಿವೇಣಿ ತನಯ
ಅಂದು -ಇಂದು

ಅಪ್ಪ ಅಮ್ಮನ ಒಂದು ತೀಕ್ಷ್ಣ ನೋಟ,
ನಿಲ್ಲಿಸುತ್ತಿತ್ತು ನಮ್ಮ ತರ್ಲೆ ಚೇಷ್ಟೆ ಆಟ,
ಬಾಯಿಯೇ ಬಿಡದ ಒಂದು ಕಣ್ಣ ಸನ್ನೆ,
ನಡವಳಿಕೆಯ ರಥ ತಿರುಗಿಸುವ "ಸನ್ನೆ ".

ಮೌನ ನೋಟ -ತಿಳಿಸೋ ಪಾಠ

ಎಲ್ಲಿದೆ ಇಂದು ಮೌನ -ನೋಟಕೆ ಬೆಲೆ?
ಸತ್ತೇಹೋಗಿದೆ ಅರ್ಥಮಾಡ್ಕೊಳ್ಳೋ ಕಲೆ!
ಚಂದವಲ್ಲವೇ ಸೂಕ್ಷ್ಮ ಗ್ರಹಿಕೆ -ಸ್ಪಂದನ?
ನವನಾಗರೀಕತೆ ಕೊಂದಿದೆ ಸಂವಹನ!

ದೇವಯಾಗ -ಜೀವನ ಯೋಗ

ದೇವರ ಪೂಜೆಯೆಂದರೆ ದೇವರ ಕೋಣೆಯಲ್ಲಲ್ಲ,
ಅನುದಿನ ಕ್ಷಣದ ವ್ಯಾಪಾರ ಅವನದೇ ಎಲ್ಲ,
ಆ ಸ್ಮರಣೆ ಬರುತಿರಲು ಅಹಂ ಮಮ ನಾಶ,
ಅನುಭವಕ್ಕೆ ಬಂದಾನು ಮುಂದೊಮ್ಮೆ ಈಶ.

ಪ್ರತಿ ಆಟ -ಜೀವಕ್ಕೆ ಪಾಠ

ಪ್ರತಿ ಘಟನೆ ಪ್ರತಿ ತಿರುವು ಪ್ರತಿಯೊಂದು ಆಟ,
ದೇವ ನಿಂತು ಜೀವದುದ್ಧಾರಕ್ಕೆ ಕೊಡುವ ಪಾಠ,
ಏನೇ ಮಾಡಲು ಯಾವ ಜೀವ ಸ್ವತಂತ್ರ ಹೇಳು?
ನೀನು ಕಟ್ಟಿ ತಂದದ್ದೇ ಉಣಿಸುವ ಅವ ಕೇಳು!

ಗೊತ್ತೆಂಬ ಮತ್ತು -ತರುವುದಾಪತ್ತು

ಯಾರಿಗೇನೇ ಹೇಳು -ನನಗೆಲ್ಲಾ ಗೊತ್ತು,
ಜ್ಞಾನಿಗಳನ್ನೂ ಮೀರಿಸುವ ಭಾರೀ ಗತ್ತು,
ಸ್ವಂತ ಬುದ್ಧಿಯದು ಇಲ್ಲವೇ ಇಲ್ಲ,
ಇನ್ನೊಬ್ಬರ ಮಾತು ಕೇಳೋದೇ ಇಲ್ಲ.
[Contributed by Shri Govind Magal]

Wednesday 18 October 2017

Bhava Spandana - 26

ಭಾವ ಸ್ಪಂದನ by “ತ್ರಿವೇಣಿ ತನಯ

ನಿತ್ಯಾನುಸಂಧಾನ

ವ್ಯವಹರಿಸೋ ಪ್ರತಿವ್ಯಕ್ತಿಯಲಿ ದೈವಶಕ್ತಿಯ ಕಾಣು,
ಎಲ್ಲಜೀವ ಜಡಗಳಂತೆ ನೀನೂ ಒಂದು ಅಸ್ವತಂತ್ರ ಅಣು,
ನೆನಪಿರಲಿ ಬದುಕಿನ ಎಲ್ಲಾ ನಡೆಗಳು ಪೂರ್ವನಿಯೋಜಿತ,
ಶಾರಣ್ಯದ ನಿರ್ಲಿಪ್ತ ಭಕ್ತಿ ಹರಿದಿರಲದು ಅಬಾಧಿತ.

ಪ್ರಶ್ನೆ ಉತ್ತರ -ಅವನ ಬಿತ್ತರ

ಕೊನೆತನಕ ಪ್ರಶ್ನೆಯಾಗುಳಿವವ ಭಗವಂತ,
ಪ್ರಶ್ನೆಯಾಗಿದ್ದೇ ಉತ್ತರ ಕರುಣಿಸುವ ಅನವರತ,
ಪ್ರಶ್ನೆಯೋ ಉತ್ತರವೋ ಹುಡುಕುವವರಿಗೆ ಲಭ್ಯ,
ಕರೆಯದಲೆ ಬರುವವನಲ್ಲ ಅವ ಭಾರೀ ಸಭ್ಯ!

ಹೊರಗೆ ಕಾಣ -ಒಳಗಿಹ ಜಾಣ

ಬಂದರೂ ಹೊರಗಣ್ಣಿಗೆಂದೂ ಕಾಣ,
ಗೋಚರ ಅನುಭವದ ಚಾಳೀಸಿಗೆ ಜಾಣ,
ಬಗೆಬಗೆಯ ವೇಷ ತೊಡುವ ಮಾಯಗಾ ,
ಮಣ್ಣಿಗೆ ತಕ್ಕಂಥ ಬೊಂಬೆ ಮಾಡುವ ಕುಂಬಾರ.

ಮಡಿ ಮೈಲಿಗೆ -ದೂರಾದ ಸಲಿಗ

ಅರ್ಥವಿರದ ಆಚಾರ ಮಡಿ ಮೈಲಿಗೆ,
ದೂರವಾಗಿದೆ ಮಾನವತ್ವದ ಸಲಿಗೆ,
ಮೈಲಿಗೆಯಾಗುವುದು ಮೈಯಲ್ಲ ಮನ,
ಸ್ವಚ್ಛವಿಡು ಮನ -ಅದು ದೇವಉದ್ಯಾನ.

ಸ್ಥಾನ ಮಾನ -ನೈತಿಕತೆಯ ಅವಸಾನ

ಎಲ್ಲಿ ಹೋಯ್ತು ಪ್ರೀತಿ ವಿಶ್ವಾಸ ಸಂಬಂಧ?
ಮಾಪನ ಯಾವುದದು ಅಳೆಯಲು ಅನುಬಂಧ?
ಮಡಿ ಮೈಲಿಗೆಗೆ ಸಾಮಾಜಿಕ ಸ್ಥಾನ ಮಾನ?
ನಾಟಕದಲ್ಲೇ ಆಗುತಿದೆ ಮಾನವತ್ವದ ಅವಸಾನ!


[Contributed by Shri Govind Magal]

Saturday 14 October 2017

Bhava Spandana - 25

ಭಾವ ಸ್ಪಂದನ by “ತ್ರಿವೇಣಿ ತನಯ

ಶಾಖ ಪಾಕ -ನಾಕ ನರಕ

ಶಾಖದಿಂದ ಮನವಾಗಬೇಕು ಪಾಕ,
ಅದಾಗದಿದ್ದರೆ ಇಲ್ಲೂ ಮೇಲೂ ನರಕ,
ಎಂತಿದೆಯೋ ಅಂತೇ ಆಗುವುದು ಖಚಿತ,
ಕೃಷ್ಣಾರ್ಪಣವೆನುವ ನಿರ್ಲಿಪ್ತ ನಡೆಯದು ಉಚಿತ.

ಅವನದೇ ವ್ಯಾಪಾರ -ನಂಬಿದರೆ ಇಲ್ಲ ಭಾರ.

ಭಗವಂತನ ಮಾಡದಿರು ಕೆಲವಕ್ಕೆ ಸೀಮಿತ,
ಅವನಾದರೋ ಸರ್ವಕಾಲ ಸರ್ವತ್ರ ವ್ಯಾಪ್ತ,
ಎಲ್ಲ ನಡೆಗಳೂ ಅವನದೇ ವ್ಯಾಪಾರ,
ದೃಢಜ್ಞಾನವಿರೆ ಅವ ಹೊರುವ ಭಾರ.

ಅಳತೆಗೆ ಸಿಗದವ-ಸೆಳೆತಕ್ಕೆ ವಶನವ

ಯಾವ ಮಾಪನದಳತೆಗೂ ಸಿಗದವನು ಭಗವಂತ,
ಎಲ್ಲ ಗುಣಗಳ ಗಡಣ ಆನಂದಮಯ ನಿತ್ಯತೃಪ್ತ,
ಏನು ಮಾಡಬಲ್ಲದು ಜೀವ-ಎಲ್ಲವೂ ಅವನ ಕರುಣೆ,
ಕೊಡಲಿ ಅವನೀಶ ನಾ ದಾಸ ಎಂಬ ನಿಷ್ಠಿತ ಸ್ಮರಣೆ.

ತೆರೆದ ಮನಸ್ಸು -ಸಹಜ ತಪಸ್ಸು

ಹಸಿದವರಿಗೆ ಪ್ರೀತಿಯಲಿ ತಿನ್ನಿಸು,
ನೊಂದವರಿಗೆ ಸ್ನೇಹದಲಿ ನಗಿಸು,
ತೋರದಿರು ಯಾರಲೂ ಮುನಿಸು,
ಇದೊಂದೇ ಅವನೊಪ್ಪುವ ತಪಸ್ಸು.

ಸಹಜ ಯಾಗ -ಶುಭ ಯೋಗ

ಶ್ರೀಗಂಧಲೇಪನವದು ಹಿತ,
ಹುಣ್ಣಿಮೆಯ ಬೆಳಕದು ಹಿತ,
ಸಾಧು ಸಜ್ಜನರ ಸಹಯೋಗ,

ಎಲ್ಲಕ್ಕೂ ಮಿಗಿಲಾದ ಶುಭಯೋಗ.


[Contributed by Shri Govind Magal]

Upanyasa Chintana - ಉಪನ್ಯಾಸ ಚಿಂತನ

ನನ್ನೊಳು ಹರಿದ ಉಪನಿಷತ್ ಝರಿ-
ನಿಮಗೊಪ್ಪಿಸುವ ಸರಳ ಪರಿ .

ಇದು ಅಣುನಾರಾಯಣ ಉಪನಿಷತ್ತು,
ಅಷ್ಟಾಕ್ಷರದ ಮಹಿಮೆಯ ಉಪನಿಷತ್ತು,
ಪ್ರತಿ "ಬ್ರಾಹ್ಮಣ"ಗೂ ಬೇಕಾದ ಉಪನಿಷತ್ತು,
ಹೇಳುವ ಕೇಳುವರಲ್ಲಿದ್ದು ತಿಳಿಸಲಿ ದೈವದ ಮಹತ್ತು.

ಪ್ರಳಯದ ನಂತರ ನಾರಾಯಣ ಬಯಸಿದ,
ಪುರುಷನಾಗಿ ಎಲ್ಲಾ ಕಡೆ ಇದ್ದು ವ್ಯಾಪಿಸಿದ,
ಬ್ರಹ್ಮಾಂಡದ ಮನೆಯ ವಾಸಿಯಾದ,
ಪಿಂಡಾಂಡ ದೇಹದ ನಿವಾಸಿಯಾದ.

ಪುರುಷಸೂಕ್ತದ ಪ್ರತಿಪಾದ್ಯ ನಾರಾಯಣ,
ಕಾಣದಿದ್ರೂ ಎಲ್ಲೆಲ್ಲೂ ಅವನದೇ ಅನಾವರಣ,
ಅದವನ ಸೃಷ್ಟಿಯ ಮೇಲಿನ ಕರುಣ,
ದೋಷವೇ ಇರದ ಗುಣಗಳ ಗಡಣ.

ಕಾಣದ ಸೂಕ್ಷ್ಮರೂಪದಿಂದಿತ್ತು ಜಗತ್ತು,
ಕಾಣುವ ಸೃಷ್ಟಿಯ ಬಯಕೆಯ ಗಮ್ಮತ್ತು,
ಮಾಡಿದ ಬ್ರಹ್ಮ ಪ್ರಾಣತತ್ವದ ಆವಿಷ್ಕಾರ,
ಇಟ್ಟ ಅಭಿಮಾನಿದೇವತೆಗಳ ಅವತಾರ.

ಆಯಿತು ಪಂಚಭೂತಗಳ ನಿರ್ಮಾಣ,
ನಾರಾಯಣನ ಸೃಷ್ಟಿಯೇ ಕಾರಣ,
ಪಿಂಡಾಂಡದೊಳಗಿರುವ ಮನಸು,
ಮೊಮ್ಮಗನಧೀನ-ರುದ್ರನೆಂಬ ಕೂಸು.

ಹನ್ನೆರಡು ಆದಿತ್ಯರ ಸೃಷ್ಟಿ,
ಹನ್ನೊಂದು ರುದ್ರರ ಸೃಷ್ಟಿ,
ಎಂಟು ವಸುಗಳ ಸೃಷ್ಟಿ,
ವೇದ ಛಂದಸ್ಸುಗಳ ಸೃಷ್ಟಿ.

ಸಂಸ್ಕೃತ ಎಲ್ಲಾ ಭಾಷೆಗಳಿಗೂ ಮೂಲ,
ಎಲ್ಲಾ ಭಾಷೆಗಳ ನಿರ್ಮಾಣ ಮಾಲ,
ನಾಮ ರೂಪದ ಮೂಲ ಅವನೇ ನಾರಾಯಣ,
ಸಮಸ್ತ ಸೃಷ್ಟಿಯ ಋಗ್ವೇದ ಖಂಡದ ಹೂರಣ.
______________________

ಸದಾ ನಿತ್ಯನಾದವ ನಾರಾಯಣ,
ಎಲ್ಲವೂ ಅವನಿಂದಲೇ ಅನಾವರಣ,
ಎಲ್ಲವೂ ಭಗವಂತನಿಂದಲೇ ಬಂದದ್ದು,
ಇಲ್ಲದೇ ಇದ್ದದ್ದು ಬಂದಾಗ-ಅದೇ ಹುಟ್ಟಿದ್ದು.

ಎಲ್ಲರ ಎಲ್ಲದರ ಅಂತರ್ಯಾಮಿ,
ಎಲ್ಲರಿಗೂ ಎಲ್ಲದಕ್ಕೂ ಅವನೇ ಸ್ವಾಮಿ,
ಅವನು ಎಲ್ಲ(ದ)ರಲ್ಲೂ ವ್ಯಾಪ್ತ,
ಅರಿತವರಿಗೆ ಮಾತ್ರ ಅವ ಆಪ್ತ.

ಬ್ರಹ್ಮನಲ್ಲಿ ಶಿವನಲ್ಲಿ ಎಲ್ಲರಲ್ಲೂ ಅವನೇ,
ಅವರವರಲ್ಲಿದ್ದು ಅವರತನ ಕೊಟ್ಟವ ತಾನೇ,
ಇಂದ್ರನಲ್ಲೂ ಅವನೇ ನಾರಾಯಣ,
ಸರ್ವತ್ರವ್ಯಾಪ್ತನಿದ್ದು ಅಲ್ಲಲ್ಲೇ ಅನಾವರಣ.

ಯಾವ ದೇವತೆಯೂ ಸ್ವತಂತ್ರನಲ್ಲ,
ಎಲ್ಲರೊಳಗಣ ಅಂತಶ್ಯಕ್ತಿ ಲಕುಮೀನಲ್ಲ,
ಪ್ರತಿಯೊಂದೂ ಕರ್ಮಗತಿಯ ಕೊಡುಗೆ,
ಅದರಂತೇ ದೈವ ಬಡಿಸುವ ಅಡುಗೆ.

ಎಲ್ಲಾ ಶಬ್ದಗಳೂ ಹೆಸರುಗಳೂ ಅವನ ನಾಮ,
ಅದನ್ನೇ ಹೇಳುತ್ತದೆ ವಿಷ್ಣುಸಹಸ್ರ ನಾಮ,
ಪ್ರಕೃತಿಯ ಪ್ರತಿಯೊಂದೂ ನಾದ,
ಭಗವಂತನನ್ನೇ ಶಬ್ದಿಸುವ ವೇದ,
ಒಳಗೆ ಹೊರಗೆ ಮೇಲೆ ಕೆಳಗೆ ಎಲ್ಲ ದಿಕ್ಕು,
ಎಲ್ಲೆಲ್ಲೂ ಅವನೇ ಇರುವ ಹಾಸುಹೊಕ್ಕು.

ನಿಷ್ಕಳಂಕ ನಿರಂಜನ ನಿರ್ವಿಕಲ್ಪ ನಿರಾಖ್ಯಾತ,
ಪ್ರಾಕೃತದ ಲೇಪವೇ ಇರದ ಅಪ್ರಾಕೃತನಾತ,
ಸೃಷ್ಟಿ ಸ್ಥಿತಿ ಸಂಹಾರಗಳ ಆಟದಂತೆ ನಡೆಸುವವ,
ಪ್ರತಿಯೊಂದರ ಅಂತಶ್ಯಕ್ತಿ ಅವನೇ ಎಂಬ ಭಾವ,
ಸರ್ವಶಕ್ತ ಸರ್ವವ್ಯಾಪ್ತ ಸರ್ವಾಂತರ್ಯಾಮಿ,
ತನ್ನಾಮ ತದ್ರೂಪನಾಗಿ ನಡೆಸುವ ನಾರಾಯಣ ಸ್ವಾಮಿ,
ಇದೆಲ್ಲಾ ಯಜುರ್ವೇದ ಖಂಡದ ತಾತ್ಪರ್,
ಋಷಿ ಮುನಿಗಳು ಕಂಡುಕೊಂಡ ಆಂತರ್ಯ.
________________________

ಉಪನಿಷತ್ತಿನ ಸಾಮವೇದದ ಸಾರ,
ನಾರಾಯಣಷ್ಟಾಕ್ಷರ ಮಂತ್ರದ ದ್ವಾರ,
ಮೊದಲು ಪಠಿಸುವುದು ಓಂಕಾರ,
ಕೊನೆಗೆ ನಾರಾಯಣಗೆ ನಮಸ್ಕಾರ.

ನಾರಾಯಣಷ್ಟಾಕ್ಷರ ಮೂಲ ಮಂತ್ರ,
ನಾಡಿಲೆಕ್ಕಕ್ಕನುಸಾರ ಪಠಿಸುವ ತಂತ್ರ,
ತಾರಕವದು ಗಾಯತ್ರಿಯ ಮೂರುಪಟ್ಟು,
ಹೆಚ್ಚಾದರೆ ತಡೆಯದ ದೇಹಕ್ಕದು ಪೆಟ್ಟು.

ಅಕ್ಷರಗಳು ಅವು  ಅನಂತ,
ದೇವನಾಮಗಳೂ ಅನಂತ,
ನಮಗಷ್ಟೇ ಇಂತಿಷ್ಟೆಂದು ಸೀಮಿತ,
ಸಂಖ್ಯೆ ಶಬ್ದಗಳ ಮೀರಿದವನಾತ.

ಗೊತ್ತಿರುವ ಯಾವುದೂ ಅವನಲ್ಲ,
ಗೊತ್ತಾಗದದ್ದನ್ನು ನಂಬುವುದಾಗಲ್ಲ,
ಗೊತ್ತಿಲ್ಲದ ಎತ್ತರದ ದೇವರು ತಿಳಿಯಲ್ಲ,
ಗೊತ್ತಾಗುವಷ್ಟೇ ಉತ್ತರ ತಿಳಿಯಬಹುದಲ್ಲ,
ಅವನು ಆಳ ಅಗಲ ಸಿಗದ ಮಹತ್ಸಾಗರ,
ನಮ್ನಮ್ಮ ಯೋಗ್ಯತೆಯೆಷ್ಟೇ ಅವ ಗೋಚರ.

ಎಚ್ಚರ ಕನಸು ನಿದ್ರೆ,
ಮೂರು ಸ್ಥಿತಿಗಳ ಜಾತ್ರೆ,
ಎಚ್ಚರದಲ್ಲಿ ಅಜ್ಞಾನ,
ಕನಸಿನಾಟವೇ ಮಾನ,
ನಿದ್ರೆಯಲ್ಲಿ ಗೊತ್ತಿಲ್ಲವೆಂಬ ಜ್ಞಾನ,
ಎಚ್ಚರದಲ್ಲೂ ಬರಬೇಕಾದ ಧ್ಯಾನ.

ಓಂಕಾರದ ಅಷ್ಟಾಕ್ಷರದ ಚಿಂತನೆ,
ಮೂರು ವ್ಯಾಹೃತಿಗಳ ಪ್ರತಿಪಾದನೆ,
ವಿಶ್ವ ತೈಜಸ ಪ್ರಾಜ್ಞರ ಆಡೋ ಆಟ,
ಮೂರರಿಂದ ಎಂಟರ ದರ್ಶನದ ನೋಟ.

ಅಕ್ಷರ ಅಕ್ಷರದಿಂದಲೂ ಅವನು ಅಕ್ಷರ,
ನಾರಾಯಣ ಅದ್ವಿತೀಯ ಅಜರಾಮರ,
ದೋಷ ಪರಿಹಾರ ಮಾಡಿ ಕೊಡುವ ಆನಂದ,
ತಿಳಿದು ಪಠಿಸುವವರಿಗೆ ಅಷ್ಟಾಕ್ಷರಮಂತ್ರವೇ ವೇದ,
ಇದು ಸಾಮವೇದದ ಖಂಡದ ಸಾರ,
ತಿಳಿದು ಧ್ಯಾನಿಸಿದವರಿಗೆ ಅಮೃತತ್ವದ ದ್ವಾರ.
________________________

ಉಪನಿಷತ್ತಿನ ಅಥರ್ವವೇದದ ಸಾರ,
ಓಂಕಾರದ ಉಪಾಸನೆಯ ದ್ವಾರ,
ಪ್ರತಿ ಅಕ್ಷರವೂ ಭಗವಂತನ ನಾಮ,
ಆನಂದಸ್ವರೂಪನ ತಿಳಿವುದೇ ನೇಮ.

ಓಂಕಾರ ಪ್ರಣವ ಸ್ವರೂಪ,
ಸರಿಸಾಟಿಯಿರದ ಭೂಪ,
ಅವನಲ್ಲಿ ದೋಷ ತ್ರಿಗುಣಗಳಿಲ್ಲ,
ಗುಣಗಳ ಗಡಣ ಲಕುಮೀನಲ್ಲ,
ಇದು ಮೂರು ವೇದಗಳ ಸಾರ,
ತಿಳಿದವರಿಗೆ ಲಭ್ಯ ಭವಸಾಗರದ ತೀರ.

ಭಗವಂತನಲ್ಲಿ ಮನ ನೆಲೆಗೊಳಿಸಿದವ ಯೋಗಿ,
ಮನನಪೂರ್ವಕವಾಗಿ ಜಪಿಸಿದವನು ನಿರೋಗಿ,
ಲಭ್ಯವವನಿಗೆ ವೈಕುಂಠ ಲೋಕ,
ಜ್ಞಾನಾನಂದಮಯನ ಅರಿವಿನ ಪಾಕ.

ದೇವಕೀ ಎಂದರೆ ವೇದ,
ಪುತ್ರ ಭಗವಂತನ ನಾದ,
ಮಧುಸೂದನ ಎಂದರೆ ಏನು?
ಸಾತ್ವಿಕರಿಗೆ ಆನಂದದ ಜೇನು,
ಪುಂಡರೀಕಾಕ್ಷ ಎಂದರೆ ಕೆಂಪಾದ ಕಣ್ಣಿನವನು,
ವಿಷ್ಣುವಾಗಿ ವ್ಯಾಪ್ತನಾಗಿ ವಿಷವ ಕಳೆವವನು.

ಸರ್ವಭೂತದ ಒಳಗಿರುವವನು,
ತನ್ನಾಮ ತದ್ರೂಪನಾಗಿ ತೋರುವವನು,
ಅನಂತರೂಪನಾದರೂ ಅವ ಏಕರೂಪ,
ನಾರಾಯಣನೆಂದಿಗೂ ಸರಿಸಮನಿರದ ಭೂಪ,
ಎಲ್ಲದಕ್ಕೂ ಭಗವಂತನೇ ಕಾರಣ,
ಕಾರಣವಿರದ ಪರಬ್ರಹ್ಮ ನಾರಾಯಣ.

ಹಗಲು ಪಠಿಸಿದರೆ ರಾತ್ರಿಯ ಪಾಪನಾಶ,
ಸಂಜೆ ಪಠಿಸಿದರೆ ಹಗಲಿನ ಪಾಪನಾಶ,
ಮಧ್ಯಾನ್ಹ ಪಠಿಸಿದರೆ ಮಹಾಪಾತಕಗಳ ನಾಶ,
ಸಮಸ್ತ ವೇದಗಳ ಸಾರ-ಭಗವಂತನೊಡನೆ ವಾಸ.

[Composed by Shri Govind Magal]

Wednesday 11 October 2017

Bhava Spandana - 24

ಭಾವ ಸ್ಪಂದನ by “ತ್ರಿವೇಣಿ ತನಯ

ಸ್ವಗತ

ಮನ ನಾಲಿಗೆ ತಪ್ಪಿದರೆ ಸ್ತಿಮಿತ,
ಆಗಬಹುದು ನೋವಿನ ಅನಾಹುತ,
ಹಿಡಿತ ಕೊಡು ಮನ ನಾಲಿಗೆ ಮೇಲೆ,
ಹಿತ ನೀಡುತಿರಲಿ ನೀನಾಡಿಸೋ ಲೀಲೆ.

ಕಾಣದ ಕರ್ಮ -ಜೀವನದ ಮರ್ಮ

ಪಾಪ ಪುಣ್ಯಗಳೂ ಕಣ್ಣಿಗೆ ಕಾಣುವುದಿಲ್ಲ,
ನಿತ್ಯಾನುಭವಗಳೂ ಕಣ್ಣಿಗೆ ಕಾಣುವುದಿಲ್ಲ,
ಅನುಭವಿಸಲೇ ಬೇಕು ಇದ್ದಂತೆ ಕರ್ಮ,
ಕಾಣದಿರುವುದೇ ಹೆಚ್ಚು ಜೀವನದ ಮರ್ಮ.

ಜೀವನದ ಒಡಲು -ಸಮ್ಮಿಶ್ರ ಕಡಲು

ಸಾಧ್ಯವಾದರೆ ನಗುತ ಪ್ರೀತಿಯ ಹಂಚು,
ಆಗದಿರು ಯಾರಿಗೂ ಬಾಣಲೆ ಹೆಂಚು,
ಏನಿದೆ ನಿನದೆಂದು ಇತರರಿಗೆ ಕೊಡಲು,
ಎಲ್ಲವೂ ಅವನಿತ್ತ ಸಮ್ಮಿಶ್ರ ಕಡಲು.

ವಂದನೀಯ -ನಿಂದನೀಯ

ಉದಾತ್ತ ವ್ಯಕ್ತಿಗಳು ಗುಣಗಳ ಗಡಣ,
ಮೂರ್ಖರ ಆಸ್ತಿಯದು ಬರೀ ದುರ್ಗುಣ,
ಒಬ್ಬನಾದರೂ ಸಜ್ಜನ ವಂದನೀಯ,
ಮೂರ್ಖರು ಸಾವಿರಿದ್ದರೂ ಹೇಯ.

ನಗೆಯ ಮಿಂಚು -ಜ್ಞಾನ ಹಂಚು

ಸ್ನೇಹ ಪ್ರೀತಿ ಜ್ಞಾನ ಹಂಚು,
ಆಗುವುದದು ಖಚಿತ ಹೆಚ್ಚು,
ಮುಚ್ಚಿಟ್ಟ ಸುಜ್ಞಾನದ ಪಾಲು,
ನಾಯಿ ಮೊಲೆಯಲ್ಲಿನ ಹಾಲು.
[Contributed by Shri Govind Magal]

Sunday 8 October 2017

Bhava Spandana - 23

ನಿನ್ನೊಳಗೇ ನೀ ಮಾಣು-ಮನಗಾಣು .

ಕಾಣೋದೆಲ್ಲಾ ಸತ್ಯವಲ್ಲ ,
ಕಾಣದ್ದು ಎಲ್ಲಾ ಅಸತ್ಯವಲ್ಲ ,
ಕಾಣುವುದು ಕಣ್ಣಲ್ಲ ಒಳಮನಸು ,
ಅವಧೂತರಿತ್ತ ಅಧ್ಯಾತ್ಮ ತಿನಿಸು .

ಭಾವ ಸ್ಪಂದನ by “ತ್ರಿವೇಣಿ ತನಯ

ಮನದಾಲಯ -ಆಗಲಿ ಅಜ್ಞಾನದ ಲಯ

ಎಲ್ಲೇ ಸುತ್ತು ಕಾಡು ಮೇಡು ಹಿಮಾಲಯ,
ಎಷ್ಟೇ ಇರಲಿ ನೋಡಿ ಅರ್ಚಿಸಿದ ದೇವಾಲಯ,
ಅಜ್ಞಾನದ ಹಿಮವದು ಆಗಬೇಕು ಲಯ,
ಅನುಭವವಾಗಬೇಕು ಎದೆಯ ದೇವಾಲಯ.

ಬೇಡ ಸೊಕ್ಕು -ಸಜ್ಜನರಲಿ ಮನವಿಕ್ಕು

ಭಗವಂತನಿರುವುದು ಎಲ್ಲದರಲಿ ಹಾಸುಹೊಕ್ಕು,
ಆಗದಿರು ಮೆತ್ತಗೆ ಕಣ್ಮುಚ್ಚಿ ಹಾಲಕುಡಿವ ಬೆಕ್ಕು,
ದೂರಾಗಲಿ ಪೊಳ್ಳು ಅಹಂಕಾರದ ಸುಳ್ಳು ಸೊಕ್ಕು,
ನಿಜ ಜ್ಞಾನ ಸಜ್ಜನರ ಪಾದಗಳಲಿ ಮನವಿಕ್ಕು.

ಗುದ್ದು -ಸದ್ದು -ಮದ್ದು

ಭಗವಂತನ ಗುದ್ದು ಆಗುವುದಿಲ್ಲ ಸದ್ದು ,
ತಿಳಿದು ತಿದ್ದಿಕೊಳ್ಳುವವರಿಗೆ ಅದೇ ಮದ್ದು,
ಅರಿವಾಗದಿರೆ ಜೀವನದಾಟವೇ ರದ್ದು,
ಸ್ವಭಾವಕ್ಕೆ ತಕ್ಕ ಬದುಕು -ಬೇಡ ಜಿದ್ದು .

ಹೆಣ್ಣಾದರೇನು -ಗಂಡಾದರೇನು?

ಭಗವಂತನರ್ಚಿಸಲು ಹೆಣ್ಣಾದರೇನು ಗಂಡಾದರೇನು?
ಎದೆಯೊಳು ತುಂಬಿರಲು ಪ್ರಾಮಾಣಿಕ ಭಕ್ತಿಯ ಜೇನು,
ದುಂಬಿಯಾಗಿ ಬಂದು ಹೀರುವ ಭಕ್ತವತ್ಸಲ ತಾನು,
ಶಬರಿ ಅಹಲ್ಯೆ ಮುಂತಾದವರ ಉದ್ಧರಿಸಿಲ್ಲವೇನು?
[Contributed by Shri Govind Magal]

Thursday 5 October 2017

Bhava Spandana - 22

ಭಾವ ಸ್ಪಂದನ by “ತ್ರಿವೇಣಿ ತನಯ

ಜ್ಞಾನ -ಭಕ್ತಿ -ವೈರಾಗ್ಯ

ಇರಬೇಕಾದವು ಜ್ಞಾನ ಭಕ್ತಿ ವೈರಾಗ್ಯ ,
ಇವೆ ಎಲ್ಲಾ -ಬದಲಾಗಿದೆ ಕೊಂಚ ಜಾಗ,
ಲೌಕಿಕಬೇಕುಗಳ ಜ್ಞಾನ-ಸಂಸಾರದಿ ಭಕ್ತಿ,
ಪಾರುಗಾಣಿಸುವವನೆಡೆಗೆ ಸತತ ವಿರಕ್ತಿ .

ಸಹಜ ಧರ್ಮ

ಕೃಷಿ ಮಾಡುತಿರು ಧರ್ಮ,
ಬೇಡ ಲೌಕಿಕದ ಕುಕರ್ಮ,
ಹುಡುಕದಿರು ತಪ್ಪ ಬೇರೆಯವರಲ್ಲಿ,
ಮನ ನೆಟ್ಟಿರಲಿ ಸತತ ಹರಿಸ್ಮರಣೆಯಲ್ಲಿ.

ಬಂಧ -ಸಂಬಂಧ

ಯಾತರದು ಈ ಥರದ ದೇಹ ಸಂಬಂಧ,
ಬೇಕುಗಳ ನಿರೀಕ್ಷೆಯಲಿ ಬೆಸೆದ ಬಂಧ,
ಕೇಳದಲೇ ತಕ್ಕದನು ಕೊಡುವವನು ಬಂಧು,
ನಿರೀಕ್ಷೆಯಿರದೆ ಸಮಗತಿ ಕರುಣಿಸುವವ ಆತ್ಮಬಂಧು.

ಬೇಡ ಪ್ರತಿಕ್ರಿಯೆ-ಬೇಕು ನಿವಾರಣಾಪ್ರಕ್ರಿಯೆ

ಘಟನೆಗಳಿಗೆ ಬೇಡ ಆತುರದ ಪ್ರತಿಕ್ರಿಯೆ,
ಬರಲಿ ಸಮಚಿತ್ತದ ನಿವಾರಣಾ ಪ್ರಕ್ರಿಯೆ,
ನಿನ್ನ ಕಂಗೆಡಿಸುವದು ಘಟನೆಗಳಲ್ಲ,
ಅಧೀರ ಅಪಕ್ವ ಅಸ್ಥಿರ ಮನಸ್ಥಿತಿಗಳೆಲ್ಲ.

ಬಂಧನ -ಬಿಡುಗಡೆಯ ಚಂದನ

ಬಂಧನದೊಳಿದ್ದರೂ ಬಾಳಾಗುವುದು ಚಂದ,
ತೇಯ್ದು ಬೀರುತಲಿರು ಸ್ನೇಹ ಪ್ರೀತಿಯ ಗಂಧ,
ಬಂದದನುಭವಿಸುತ ಶರಣಾಗಿ ನೀ ನಡೆ,
ದೈವ ಹಿಡಿವುದು ತಪ್ಪದೆ ರಕ್ಷಣೆಯ ಕೊಡೆ.
[Contributed by Shri Govind Magal]

Tuesday 3 October 2017

Bhava Spandana - 21


ಭಾವ ಸ್ಪಂದನ by “ತ್ರಿವೇಣಿ ತನಯ

ಅಜ್ಞಾನದ ಬೇಲಿ -ತಲೆ ಖಾಲಿ

ಜ್ಞಾನಿ -ಸಂತರಿಗೂ ಮಠ ಮಠದ ಬೇಲಿ,
ಮಾನವತ್ವದ ನೆಲೆಯಲಿ ಎಲ್ಲ ತಲೆ ಖಾಲಿ,
ವಿವಿಧತೆಯಲಿ ಏಕತೆಯಿರದ ಅದೆಂಥಾ ಭಕ್ತಿ?
ಕೀಳು ಭೇದ ಭಾವಗಳ ಒಪ್ಪೀತೇ ಪರಶಕ್ತಿ?

ಹಣಕ್ಕಿಲ್ಲ ಬೆಲೆ -ಕಂಡುಕೋ ನೆಲೆ

ಎಲ್ಲಿ ನೋಡಿದರೂ ಹಣ ಮಾಡುವ ಗೀಳು,
ಹೆಣವಾಗುವವರೆಗೂ ಹಣಕ್ಕೇ ದುಡಿವ ಬಾಳು,
ಪರಲೋಕದಲ್ಲಿ ನಿನ್ನ ಹಣಕ್ಕಿಲ್ಲ ಕವಡೆಯ ಬೆಲೆ,
ತತ್ವಜ್ಞಾನದ ಹಿಂದೆ ಬಿದ್ದು ಕಂಡುಕೋ ನಿನ್ನ ನೆಲೆ.

ಬೆಂಬಿಡದ ಶಾಖ -ಮನವಾಗಲಿ ಪಾಕ

ತಾಯ ಗರ್ಭದಿ ಭರಿಸಲಾಗದ ಶಾಖ,
ಭೂಮಿಯಲಿ ಪ್ರೇಮ ಕಾಮದ ಶಾಖ,
ಜೀವನದಿ ಬಾಳ-ಕುಲುಮೆಯ ಶಾಖ,
ಕೊನೆಗೆ ನೀ ಬಿಟ್ಟ ದೇಹಕ್ಕೆ ಚಿತೆಯ ಶಾಖ.

ಸಹಿಸದ ದೇಹ -ವಿಚಿತ್ರ ಸ್ವಭಾವ

ಚಳಿಗೆ ತಡೆಯದ ದೇಹ ಮಳೆಗೆ ತಡೆಯದ ದೇಹ,
ಬಿಸಿಲ ತಡೆಯದ ದೇಹ ಮಣ್ಣಿಗೊಗ್ಗದ ದೇಹ,
ಗಾಳಿ ತಡೆಯದ ದೇಹ ಧೂಳು ತಡೆಯದ ದೇಹ,
ಆಕಾಶದೊಳಿದ್ದರೂ ಸದವಕಾಶ ಪಡೆಯದ ದೇಹ,
ಪಂಚ ಭೂತಗಳಿಂದಾದದ್ದೇ ಈ ದೇಹ,
ಪಂಚ ಭೂತಗಳಲ್ಲೇ ಲೀನವಾಗುವ ದೇಹ.

ಜಾಡು -ಪಾಡು -ಬೀಡು

ವಿಚಿತ್ರವೆನಿಸಿದರೂ ಸತ್ಯವಿದು ನೋಡು,
ಒಬ್ಬೊಬ್ಬರದೂ ಒಂದೊಂದು ಬೇರೆ ಜಾಡು,
ಅವರವರ ಮನಶ್ರುತಿಯಂತೆ ಅವರ ಹಾಡು,
ಅದರಂತೇ ಪಾಡು-ಸೇರುವರವರವರ ಬೀಡು.
[Contributed by Shri Govind Magal]

Sunday 1 October 2017

Bhava Spandana - 20

ಭಾವ ಸ್ಪಂದನ by “ತ್ರಿವೇಣಿ ತನಯ

ಎಚ್ಚರದ ನಡೆ

ಕಂಡ ಕಂಡಲ್ಲಿ ಕೈ ಚಾಚ ಬೇಡ,
ಕಂಡದ್ದೆಲ್ಲಾ ಎತ್ತಿ ಬಾಚ ಬೇಡ,
ದುಡಿದುಕೋ ಎರಡ್ಹೊತ್ತಿನ ಅನ್ನ,
ಪಡೆದುಕೋ ಸಿಕ್ಕಲ್ಲೆಲ್ಲಾ ತತ್ವಜ್ಞಾನ.

ಬಂಧು -ಬಳಗ

ಕೈ ಬಿಟ್ಟವರಿಗಾಗಿ ಕೊರಗಬೇಡ,
ಕೈ ಹಿಡಿದವರನೆಂದೂ ತೊರೆಯಬೇಡ,
ಹಿಡಿಯಲು ತೊರೆಯಲು ಎಷ್ಟರದು ಜೀವ?
ಪಡೆದು ಬಂದದ್ದನ್ನೇ ಭಗವಂತ ಕರುಣಿಸುವ.

ಬಿಚ್ಚಿಕೋ -ನೆಚ್ಚಿ ಕಚ್ಚಿಕೋ

ಮುಚ್ಚಿಡುವುದೇ ಬಿಚ್ಚುವುದಕ್ಕಾಗಿ,
ಬಿಚ್ಚದಿದ್ದರೆ ಮುಚ್ಚಿಡುವುದ್ಯಾತಕ್ಕಾಗಿ?
ತೆರೆದುಕೋ ನಿನ್ನ ನೀನು -ಬಿಚ್ಚಿಕೋ,
ತಕ್ಕಂಥ ಸ್ವಭಾವ ಕಂಡು -ಕಚ್ಚಿಕೋ.

ಪ್ರಭಾವದ ಶಕ್ತಿ-ಸ್ವಭಾವದಿಂದ ಮುಕ್ತಿ

ಮೀರಲೆತ್ನಿಸು ಪ್ರಭಾವ,
ಪ್ರಕಟವಾಗಲಿ ಸ್ವಭಾವ,
ಸ್ವಭಾವ ವಿಕಾಸವೇ ಮುಕ್ತಿ,
ಪ್ರಭಾವ ಅದ ಮುಚ್ಚುವ ದುಶ್ಯಕ್ತಿ.

ಭಯ - ಅಭಯ

ಉಳುವ ಯೋಗಿಗೆ ಬಡತನವಿಲ್ಲ,
ಭಗವದ್ಧ್ಯಾನಿಗೆ ಎಂದೂ ನೋವಿಲ್ಲ,
ಜಗಳ ದೂರವಿಡುವುದು -ಮೌನ,
ಭಯ ದೂರವಿಡುವುದು -ಜ್ಞಾನ.
[Contributed by Shri Govind Magal]