Monday 11 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 01 - 06


ಓಂ
 ದ್ವಿತಿಯೋSಧ್ಯಾಯಃ [ವಾಕ್ಯೋದ್ಧಾರಃ]

ಜಯತಿ ಹರಿರಚಿನ್ತ್ಯಃ ಸರ್ವದೇವೈಕವನ್ದ್ಯಃ
ಪರಮಗುರುರಭೀಷ್ಟಾವಾಪ್ತಿದಃ ಸಜ್ಜನಾನಾಮ್
ನಿಖಿಲಗುಣಗಣಾರ್ಣೋ ನಿತ್ಯನಿರ್ಮುಕ್ತದೋಷಃ
ಸರಸಿಜನಯನೋsಸೌ ಶ್ರೀಪತಿರ್ಮಾನದೋ ನಃ .೦೧

ನಮ್ಮೆಲ್ಲರ ಪ್ರಜ್ಞಾಸೀಮೆಯ ಆಚೆ ಇರುವ,
ದೇವತೆಗಳಿಂದ ನಮಸ್ಕಾರ ಯೋಗ್ಯನಾಗಿರುವ,
ಎಲ್ಲ ಗುರುಗಳ ಗುರುವಾಗಿ ಮೂಲಗುರುವಾಗಿರುವ,
ಸಮಸ್ತ ಸಜ್ಜನರಿಗೆ ಅಭೀಷ್ಟೆಗಳ ದಾತನಾಗಿರುವ,
ಎಲ್ಲ ಗುಣಗಳ ತುಂಬು ಕಡಲು,
ಕೊರತೆ ಇರದ ಪರಿಪೂರ್ಣ ಒಡಲು,
ತಾವರೆ ಅರಳುಗಣ್ಣುಗಳುಳ್ಳ ನಾರಾಯಣ,
ದಯಪಾಲಿಸುವ ನಮಗೆ ಜ್ಞಾನದ ಹೂರಣ.

ಉಕ್ತಃ ಪೂರ್ವೇsಧ್ಯಾಯೇ ಶಾಸ್ತ್ರಾಣಾಂ ನಿರ್ಣಯಃ ಪರೋ ದಿವ್ಯಃ
ಶ್ರೀಮದ್ ಭಾರತವಾಕ್ಯಾನ್ಯೇತೈರೇವಾಧ್ಯವಸ್ಯನ್ತೇ .೦೨

ದ್ವಿತೀಯ ಅಧ್ಯಾಯದ ಆರಂಭಪೂರ್ವ,
ಹೀಗೆ ಹೇಳುತ್ತಾರೆ ಶ್ರೀಮದಾಚಾರ್ಯ,
ನೋಡಿದ ಹಿಂದಿನ ಅಧ್ಯಾಯ,
ಮಾಡಿದೆ ಅಲ್ಲಿ ಶಾಸ್ತ್ರಗಳ ನಿರ್ಣಯ,
ಮಹಾಭಾರತದ ಪ್ರತಿ ಮಾತಿನ ಅರ್ಥ,
ಬಿಂಬಿಸುತ್ತವೆ ಎಲ್ಲಾ ಅದೇ ಶಾಸ್ತ್ರಾರ್ಥ,
ಅಧ್ಯಾಯದ ಹೆಸರೇ ವಾಕ್ಯೋದ್ಧಾರ,
ಪ್ರತಿ ವಾಕ್ಯ ಹರಿಸುವುದು ವೇದಸಾರ.

ಕ್ವಚಿದ್ ಗ್ರನ್ಥಾನ್ ಪ್ರಕ್ಷಿಪನ್ತಿ ಕ್ವಚಿದನ್ತರಿತಾನಪಿ
ಕುರ್ಯುಃ ಕ್ವಚಿಚ್ಚವ್ಯತ್ಯಾಸಂ ಪ್ರಮಾದಾತ್ ಕ್ವಚಿದನ್ಯಥಾ .೦೩

ಅಂದೇ ಗಮನಿಸಿ ಹೇಳಿದ್ದಾರೆ ಆಚಾರ್ಯ,
ಗ್ರಂಥಗಳ ಪ್ರಾಮಾಣ್ಯವದು ಸಂಶಯಾರ್ಹ,
ದ್ವೇಷದಿಂದ ಸೇರಿಸಲ್ಪಟ್ಟವು ಕೆಲವು,
ದುರಾಸೆಯಿಂದ ಕಿತ್ತಲ್ಪಟ್ಟವು ಹಲವು,
ತಮ್ತಮ್ಮ ಬಯಕೆಗಳಿಗನುಗುಣವಾಗಿ ಬದಲಾವಣೆ,
ಮೂಲವೇ ದೂರವಾಗಿ --ದಾರಿತಪ್ಪಿದ ನಿರೂಪಣೆ,
ಆಚಾರ್ಯರು ಎಚ್ಚರಿಸಿರುವ  ಮೇಲಿನ ವಾಕ್ಯ,
ಗಮನದಲ್ಲಿದ್ದರಷ್ಟೇ ಗ್ರಂಥಾವಲೋಕನವದು ಶಕ್ಯ.


ಅನುತ್ಸನ್ನಾ ಅಪಿ ಗ್ರನ್ಥಾ ವ್ಯಾಕುಲಾ ಇತಿ ಸರ್ವಶಃ ।
ಉತ್ಸನ್ನಾಃ ಪ್ರಾಯಶಃ ಸರ್ವೇ ಕೋಟ್ಯಂಶೋsಪಿ ನ ವರ್ತತೇ ॥.೦೪॥

ನಾಶವಾಗದೆ ಉಳಿದಿಹ ಗ್ರಂಥಗಳೂ ಅಸ್ತವ್ಯಸ್ತ,
ಮೂಲರಾಮಾಯಣಾದಿ ಗ್ರಂಥಳಾಗಿವೆ- ಲುಪ್ತ,
ಕೋಟಿ ಕೋಟಿಯಲ್ಲಿ ಒಂದಂಶವೂ ಈಗ ಇಲ್ಲ,
ಹೊರಟಿತಾಗ ಆಚಾರ್ಯರ ಶಾಸ್ತ್ರ ನಿರ್ಣಯದ ಬೆಲ್ಲ.

ಗ್ರನ್ಥೋsಪ್ಯೇವಂ ವಿಲುಳಿತಃ ಕಿಮ್ವರ್ಥೋ ದೇವದುರ್ಗಮಃ ।
ಕಲಾವೇವಂ ವ್ಯಾಕುಲಿತೇ ನಿರ್ಣಯಾಯ ಪ್ರಚೋದಿತಃ   ॥.೦೫॥
ಹರಿಣಾ ನಿರ್ಣಯಾನ್ ವಚ್ಮಿ ವಿಜಾನಂಸ್ತತ್ ಪ್ರಸಾದತಃ ।
ಶಾಸ್ತ್ರಾನ್ತರಾಣಿ ಸಞ್ಜಾನನ್ ವೇದಾಂಶ್ಚಾಸ್ಯ ಪ್ರಸಾದತಃ  ॥.೦೬॥

ಲಭ್ಯವಿರುವ ಮಹಾಭಾರತದ ಪಾಠದಲ್ಲೂ ಇಲ್ಲ ಶುದ್ಧಿ,
ಪಾಠವೇ ಶುದ್ಧವಿರದಾದಾಗ ಹೇಗೆ ಲಭಿಸೀತದು ಸಿದ್ಧಿ?
ಕಲಿಯುಗದಲ್ಲಾಗಲು ಶುದ್ಧಜ್ಞಾನ ಪರಂಪರೆಯ ಹ್ರಾಸ,
ಪ್ರಚೋದಿಸುತ್ತಾರೆ ಮಧ್ವರನ್ನು ನಿರ್ಣಯ ಕೊಡಲು ವ್ಯಾಸ,
ವ್ಯಾಸರನುಗ್ರಹ ಆದೇಶದಿಂದ ಅನುಗ್ರಹೀತ ಆಚಾರ್ಯ,
ಕೊಡುತ್ತಾರೆ ಗುರು ಮಹಾಭಾರತ ನಿರ್ಣಯದ ತಾತ್ಪರ್ಯ,
ಇದು ಆಚಾರ್ಯ ಮಧ್ವರೇ ಹೇಳಿದ ಮಾತು!,
ಪ್ರಾಮಾಣ್ಯಕ್ಕೆ ಮತ್ತಿನ್ನೇನು ಬೇಕು ಹೇತು?.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula