Tuesday 15 August 2017

Bhava Spandana -1

ಭಾವ ಸ್ಪಂದನ by “ತ್ರಿವೇಣಿ ತನಯ

ತಾರತಮ್ಯ
ಒಂದೇ ಮರದ ಎಲೆಗಳು ಒಂದೇ ತರವಿಲ್ಲ,
ಒಂದೇ ತಾಯಿಯ ಮಕ್ಕಳು ಒಂದೇ ತೆರನಿಲ್ಲ,
ಎಲ್ಲದರಲ್ಲೂ ಭೇದ ಅದೇ ಸೃಷ್ಟಿಯ ನಿಯಮ,
ಭೇದಗಳಲ್ಲೂ ಅಭೇದನಾಗಿ ನಿಲ್ಲುವ ಸಾರ್ವಭೌಮ.

ಕಾಣದ ಇರವು -ಬರಲಿ ಅರಿವು
ಕಾಣುವುದು ಇರುವುದು ಯಾವುದೂ ನಮ್ಮದಲ್ಲ,
ಸದಾ ನಮ್ಮೊಂದಿಗೆ ಇರುವುದು ನಮಗೆ ಕಾಣುವುದಿಲ್ಲ,
ದುಡಿದು ಕಡಿದು ಕಟ್ಟೆ ಹಾಕಿದ್ಯಾವುದೂ ಬರುವುದಿಲ್ಲ,
ಕಾಣದವನ ಕೈವಾಡ ಎಂದು ನಂಬುವವ ಕೊಂಚ ಬಲ್ಲ.

ಬುನಾದಿ -ಅನಾದಿ
ನಮ್ಮ ಶಾಸ್ತ್ರ ಪುರಾಣಗಳಲ್ಲಿ ಹೇಳದಿರುವುದೇ ಇಲ್ಲ,
ನಮ್ಮನುಭವಕ್ಕೆ ಬಂದಾಗ ನಮ್ಮ ಲೆಕ್ಕದ ಭಾಗ್ಯವೆಲ್ಲ,
ಎಲ್ಲ ಅನಾದಿಯಿಂದಿರುವುದು ಹೊಸ ಆವಿಷ್ಕಾರವಲ್ಲ,
ಜೀವಯೋಗ್ಯತೆಯಂತೆ ಪ್ರಕಟಿಸುವ ಕೃಷ್ಣನೆಂಬ ಗೊಲ್ಲ.

ಅಸ್ವತಂತ್ರ ಜೀವ -ನೈಜ ಅನುಭವ
ಸಾಧನೆ ಮಾಡುವೆನೆಂಬುದಕೆ ಜೀವ ಏನೂ ಅಲ್ಲ ,
ಶಾಸ್ತ್ರನಾಮಕ ಭಗವಂತನ ಪ್ರೇರಣೆ ಆಗಬೇಕು ಎಲ್ಲ ,
ಕಾರ್ಯ ಕಾರಣ ಕಾರಕ ಅವನೇ ಲಕುಮೀನಲ್ಲ ,
ಶುದ್ಧ ಅರಿವಿನ ಶಾರಣ್ಯವೊಂದೇ ಗತಿ ಸಾಧಕರಿಗೆಲ್ಲ .

ಅಜ್ಞಾನದ ಭ್ರಮೆ
ದೈವ ಧರ್ಮದ ಬಗ್ಗೆ ನಮ್ಮ ತಿಳುವಳಿಕೆ ಸೊನ್ನೆ,
ಕಾರಣ ಅದಕೆ ಅಜ್ಞಾನ ಅಹಂಕಾರದ ದಿನ್ನೆ,
ವಿಶ್ವದಾರ್ಶನಿಕರನ್ನು ಹಂಚಿಕೊಂಡಿದ್ದೇವೆ ಮಾಡಿ ಪಾಲುಪಟ್ಟಿ,
ಕುಳಿತಿದ್ದೇವೆ ಹಾಯಾಗಿ ಹೊಲಸು ಭ್ರಮೆಗಳ ಬೇಲಿ ಕಟ್ಟಿ.
(Contributed by Shri Govind Magal)

No comments:

Post a Comment

ಗೋ-ಕುಲ Go-Kula