Sunday 5 February 2017

ಶ್ರೀಮಧ್ವಾಚಾರ್ಯರ ನವಮೀ ಯಾತ್ರೆ

ವಿಶ್ವಗುರು ಶ್ರೀ ಮಧ್ವಾಚಾರ್ಯರನ್ನು ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ಮೊದಲ ಬಾರಿ ಕಂಡಾಗ, ಅವರ ದ್ವಾತ್ರಿಂಶತ್ ಲಕ್ಷಣೋಪೇತವಾದ ದೇಹದ ಮೈಕಟ್ಟು, ಮೇರು ಸದೃಶ ವ್ಯಕ್ತಿತ್ವ , ಅಂದರೆ ಸಾವಿರಾರು ಜನರ ಮಧ್ಯದಲ್ಲಿ ಮಧ್ವಾಚಾರ್ಯರು ನಡೆದು ಬರುತ್ತಿದ್ದರೂ ಗುರುತಿಸಬಹುದಾದ, ಅವರ ಎತ್ತರ,(ಏಳೆಂಟು ಅಡಿ ಎತ್ತರದ ದೇಹವನ್ನು ಮಧ್ವಾಚಾರ್ಯರು ಹೊಂದಿದ್ದರು ಅನ್ನುತ್ತಾರೆ ನಾರಾಯಣ ಪಂಡಿತಾಚಾರ್ಯರು) ಆ ದೇಹದಲ್ಲಿ ತುಂಬಿದ ಕಾಂತಿ, ಜ್ಞಾನದ ವರ್ಚಸ್ಸು ಇವುಗಳನ್ನು ಕಂಡು ಶ್ರೀಮಧ್ವಾಚಾರ್ಯರನ್ನು ಕಬೆನಾಡಿಗೆ ಕರೆತಂದ ಮಹಾರಾಜನನ್ನು ಕುರಿತು ಹೇಳುತ್ತಾ ಆಚಾರ್ಯಮಧ್ವರನ್ನು ಸ್ವಾಗತಿಸುವಾಗ ತ್ರಿವಿಕ್ರಮಪಂಡಿತರ ವದನದಿಂದ ತನ್ನಷ್ಟಕ್ಕೇ ಬಂದ ಉದ್ಗಾರ ನಮ್ಮ ಮೈನವಿರೇಳಿಸುತ್ತದೆ. ಯಾರನ್ನೇ ಆದರೂ ಪುಳಕಿತಗೊಳಿಸುತ್ತದೆ :

ಸ್ಚಃಸುಂದರೀಭುಜಲತಾಪರಿರಂಭಣೀ ಧೂಃ
ಪೌರಂದರೀ ಭವತಿ ಯಂ ಭಜತಾಂ ಭುಜಿಷ್ಯಾ|
ಆನಂದತೀರ್ಥಭಗವತ್ ಪದಪದ್ಮರೇಣುಃ
ಸ್ವಾನಂದದೋ ಭವತು ತೇ ಜಯಸಿಂಹ ಭೂಪ || 

"ಅಪ್ಸರೆಯರ ತೋಳ್ಬಳ್ಳಿಯ ಬಿಗಿಯಪ್ಪುಗೆಯ ವೈಭವದ ಇಂದ್ರಪದವಿ ಕೂಡ ಆಚಾರ್ಯರ ಪಾದಧೂಳಿಯನ್ನು ಸೇವಿಸುವವರ ಕಾಲಾಳು. ಆನಂದತೀರ್ಥಭಗವತ್ಪಾದರ ಅಂಥ ಮಹಿಮೆಯ ಪಾದಧೂಳಿ, ಓ ಜಯಸಿಂಹ ದೊರೆಯೆ, ನಿನಗೂ ಹಿರಿದಾದ ಆನಂದವನ್ನೀಯಲಿ"...

ಇಂಥಹ ಮಹಾನ್ ವ್ಯಕ್ತಿತ್ವ  ಎಪ್ಪತ್ತೊಂಭತ್ತು ವರ್ಷಗಳ ಕಾಲ ನಿರಂತರ ಜ್ಞಾನಪ್ರಸಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು ನಿತ್ಯಭಗವಂತನ ಆರಾಧನೆ ನಡೆಯುವಂತೆ ಉಡುಪಿಯಲ್ಲಿ ಕೃಷ್ಣಮೂರ್ತಿಯನ್ನು ಪ್ರತಿಷ್ಟಾಪಿಸಿ, ಪೂಜಾಕೈಂಕರ್ಯಗಳನ್ನು ನಡೆಸಿಕೊಂಡು, ಜ್ಞಾನಪ್ರಸಾರ ಮಾಡಿಕೊಂಡು ಹೋಗುವಂತೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿ, ಅದರ ಜವಾಬ್ದಾರಿಗಳನ್ನು ತಮ್ಮ ಎಂಟುಮಂದಿ ಸನ್ಯಾಸಿ ಶಿಷ್ಯರಿಗೆ ಒಪ್ಪಿಸಿ, ಒಂದು ದಿನ ಯಾರಿಗೂ ಹೇಳದೆ (ಚೀಟಿ ಬರೆದಿಟ್ಟು) ತಾವು ಒಬ್ಬಂಟಿಯಾಗಿ ಬದರಿಗೆ ತೆರಳಿದರು... "ಪಿಂಗಳಾಬ್ದೇ ಮಾಘಶುದ್ಧನವಮ್ಯಾಂ ಬದರೀಂ ಯಯೌ"...

ಹೀಗೆ ಅವರು ನಮ್ಮನ್ನು ಬಿಟ್ಟು ಹೋಗಿ ಇಂದಿಗೆ ಸರಿಯಾಗಿ ಏಳುನೂರು ವರ್ಷಗಳು ಸಂದಿರುವ ದಿನವಿದು... ಒಂದು ರೀತಿಯಿಂದ ದುಃಖದ ಸಂಗತಿಯಾದರೂ ಅವರು ಕೊಟ್ಟು ಹೋಗಿರುವ ಅಪರಂಪಾರವಾದ ಜ್ಞಾನರಾಶಿಯಿಂದ ಅವರು ನಮ್ಮೊಟ್ಟಿಗೆ ಇದ್ದಾರೆ ಎಂಬ ಭಾವನೆ ಎಲ್ಲರಲ್ಲೂ ಮೂಡುವಂತೆ ಮಾಡಿದೆ...

ಶ್ರೀವಾದಿರಾಜತೀರ್ಥರು ಹೇಳಿದ ಮಾತು ಇದನ್ನು ಸ್ಪಷ್ಟಪಡಿಸುತ್ತದೆ -
"ಅದೃಶ್ಯೋ  ರೂಪ್ಯಪೀಠೇsಸ್ತಿ ದೃಶ್ಯೋsಸ್ತಿ ಬದರೀತಳೇ"...
ಆಚಾರ್ಯಮಧ್ವರು ಉಡುಪಿಯ ಅನಂತೇಶ್ವರದಲ್ಲಿ ಅದೃಶ್ಯರಾಗಿ, ಅಂದರೆ ನಮ್ಮ ಕಣ್ಣಿಗೆ ಕಾಣಿಸದೆ ಇಂದಿಗೂ ಇದ್ದಾರೆ, ಬದರಿಯಲ್ಲಿ ದೃಶ್ಯರಾಗಿ, ಅಂದರೆ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ".... ಆದರೆ ಕಾಣುವ ಕಣ್ಣನ್ನು ಅವರೆ ದಯಪಾಲಿಸಬೇಕಷ್ಟೇ...

(Write up by Shri Harish B.S. - Bannanje Balaga

No comments:

Post a Comment

ಗೋ-ಕುಲ Go-Kula