Sunday 5 February 2017

ಶ್ರೀ ಮಧ್ವಾಚಾರ್ಯರು

ಮುಖ್ಯಪ್ರಾಣದೇವರು ತಮ್ಮ ಮೂರನೇಯ ಆವತಾರವಾದ ಮಧ್ವರೂಪದ ಸಮಾಪ್ತಿಯ ದಿನ ಇಂದು ಅದುವೇ "ಮಧ್ವನವಮೀ" ಮಹೋತ್ಸವ.ನಮ್ಮೆಲ್ಲರ ಪಾಲಿಗೆ ಮಹಾ ಸುದಿನ. ಶ್ರೀಮದಾಚಾರ್ಯರ ಅವತಾರ "ವಿಜಯದಶಮೀ" ಆದರೆ, ಅವತಾರದ ಸಮಾಪ್ತಿ ಮಧ್ವ ನವಮೀ.

ಕೆಲವರು ಹುಟ್ಟಿ ಸತ್ತರೂ ಅವರ ಜೊತೆಗೆ ಅವರೂ ಮತ್ತು ಅವರ ಹೆಸರೂ ಎರಡೂ ಸತ್ತು ಹೋಗಿರುತ್ತದೆ. ಮತ್ತೆ ಕೆಲವರು ಸತ್ತಮೇಲೆ ಕಥೆಯಾಗಿ ಉಳಿದಿರುತ್ತಾರೆ. ಆದರೆ ಮಹಾನುಭಾವರು ಹುಟ್ಟುವದಕ್ಕೂ ಮುಂಚೆಯೇ ಕಥೆಯಾಗಿರುತ್ತಾರೆ. ಹುಟ್ಟಿದಮೆಲೆ ಜ್ಞಾನ, ವಾಕ್ಯಾರ್ಥ, ಪರವಾದಿ ನಿಗ್ರಹ, ಸ್ವಮತ ಸ್ಥಾಪನ , ಶಾಸ್ತ್ರರಚನ, ದುಷ್ಟನಿಗ್ರಹ, ದೀನರ ಉದ್ಧಾರ, ಮುಂತಾದ  ಮಾಹಾತ್ಮ್ಯಾತಿಶಯಗಳೊಂದಿಗೆ ಇರುತ್ತಾರೆ. ಅವತಾರ ಮುಗಿದಮೇಲೆಯೂ ತಮ್ಮ ಆದರ್ಶ, ಸಿದ್ಧಾಂತ, ಸನ್ಮಾರ್ಗಪುಣ್ಯವನ್ನುಳಿಸಿ ಅನುಗ್ರಹ ಮಾಡ್ತಾನೇ ಇರುತ್ತಾರೆ.

ಋಷಿ ಮುನಿಗಳ ಪ್ರಾರ್ಥನೆಗೆ ಓಗೊಟ್ಟ ಕರುಣಾಮಯಿ ನಾರಾಯಣ ವಾಯುದೇವರಿಗೆ ಆಜ್ಙಾಪಿಸುತ್ತಾನೆ ನೀವು ಭುವಿಗೆ ಅವತರಿಸಿ ಅನುಗ್ರಹಿಸಿ ಎಂದು. ರುದ್ರೇಂದ್ರಾದಿಗಳೂ ಪ್ರಾರ್ಥಿಸುತ್ತಾರೆ. ದೇವರ ಆಜ್ಞೆ ಹಾಗೂ ದೇವತೆಗಳ ಪ್ರಾರ್ಥನೆಯನ್ನು ಸ್ವೀಕರಿಸಿದ ವಾಯುದೇವರು "ಕೇವಲ ಸ್ವಜನರಾದ ಮುಕ್ತಿಯೋಗ್ಯರಾದ ನಮ್ಮೆಲ್ಲರ ಮೇಲೆ ಅನುಗ್ರಹ ಮಾಡಬೇಕು ಎಂಬ ಉತ್ಕಟ ಅಪೇಕ್ಷೆಯೋಂದಿಗೆ" ಕರ್ಮ ಭೂಮಿಯಾದ ಭಾರತದೇಶದಲ್ಲಿ ,ಪಾಜಕ ಕ್ಷೇತ್ರದಲ್ಲಿ ಅವತರಿಸಿ ಬರುತ್ತಾರೆ.

ವಾಯುದೇವನಾಗಿ ಅವತಾರ ಮಾಡಿದ ತರುವಾಯ ಕೇವಲ ಎಂಟು ವರ್ಷಗಳಿರುವಾಗ ಆಶ್ರಮ ಸ್ವೀಕಾರ ಮಾಡುತ್ತಾರೆ. "ಸರ್ವಮೂಲ" ಎಂದೇ ಪ್ರಸಿದ್ಧವಾದ (ಸೂತ್ರಪ್ರಸ್ಥಾನ, ಗೀತಾ ಪ್ರಸ್ಥಾನ, ಪುರಾಣ ಪ್ರಸ್ಥಾನ, ಉಪನಿಷತ್ಪ್ರಸ್ಥಾನ, ಪ್ರಕರಣಗ್ರಂಥಗಳು, ಸಂಕೀರ್ಣಗ್ರಂಥಗಳು, ಋಗ್ಭಾಷ್ಯ ಕರ್ಮನಿರ್ಣಯ, ತಂತ್ರಸಾರ)  ಸಚ್ಚಾಸ್ತ್ರಗಳನ್ನು ರಚನೆ ಮಾಡುತ್ತಾರೆ.

ಇಪ್ಪತ್ತೊಂದು ಅಪವ್ಯಾಖ್ಯಾನವನ್ನು ನಿರಾಕರಣೆ ಮಾಡಿ ಬ್ರಹ್ಮಸೂತ್ರಗಳ ಸ್ಪಷ್ಟ ಅರ್ಥವನ್ನು ನಿರ್ಣಯಿಸಿ ಕೊಡುವ ಮುಖಾಂತರ ಎಲ್ಲಾ ದುರ್ಮತಗಳನ್ನೂ ಖಂಡನೆ ಮಾಡಿದ್ದಾರೆ. ಈ ಎಲ್ಲ ದುರ್ಮತಗಳೂ ಒಂದಿಲ್ಲ ಒಂದು ಮಾರ್ಗದಲ್ಲಿ ಅನಾದಿ ಇಂದ ಇದ್ದದ್ದೇ. ಅಂತೆಯೇ ಶ್ರೀಮದಾಚಾರ್ಯರೇ ಖಂಡಿಸಲು ಸಮರ್ಥರು. ಆದ ಕಾರಣ ಅವರ ಅವತಾರ ಅನಿವಾರ್ಯವೂ ಆಯಿತು.

ಅನಾದಿಕಾಲದಿಂದಲೂ ಇರುವ ಸತ್ಸಂಪ್ರದಾಯವನ್ನು ಅನೂಚಾನವಾಗಿ ತಿಳಿದವರು ವಾಯುದೇವರು ಮಾತ್ರ. ಆದ್ದರಿಂದಲೇ "ವೈಷ್ಣವ ಸಿದ್ಧಾಂತ, ದ್ವೈತಮತ, ಭೇದ, ತಾರತಮ್ಯ, ವಿಷ್ಣುಸರ್ವೋತ್ತಮತ್ವ, ವಾಯುಜೀವೋತ್ತಮತ್ವ, ಜಗತ್ಸತ್ಯತ್ವ, ಜೀವ ಸೃಷ್ಟಿ ಅನಾದಿ, ಕರ್ಮಸಿದ್ಧಾಂತ, ಮೋಕ್ಷ, ಮೋಕ್ಷದಲ್ಲಿ ಆನಂದ, ತಮಸ್ಸು,ತಮಸ್ಸಿನಲ್ಲಿ ದುಃಖ, ಕೃಮಿ ಕೀಟ ಪಶು ಪಕ್ಷಿಗಳಿಗೂ ಮೋಕ್ಷ,  " ಇವೆ ಮೊದಲಾದ ಅನಂತಾನಂತ ವಿಷಯಗಳನ್ನು ನಿರ್ಣಯಿಸಿಕೊಟ್ಟ ಭದ್ರಮಾರ್ಗವನ್ನು ಹಾಕಿಕೊಟ್ಟ ಮಹಾ ಕರುಣಾಮಯಿ.

ಅಂತೆಯೇ ನಮಗೆ ನಮ್ಮೆಲ್ಲರ ಆದಿಗುರುಗಳೂ ಆದ ಶ್ರೀಮದಾಚಾರ್ಯರು ಮಧ್ವಾಚಾರ್ಯರು ಪೂರ್ಣಪ್ರಜ್ಙರು  ಇತ್ಯಾದಿ ನಾಮಗಳಿಂದ ಪ್ರಸಿದ್ಧಾರಾದ ಶ್ರೀಮದಾಚಾರ್ಯರೇ "ಜನುಮ ಜನುಮಕ್ಕೂ ನಮ್ಮ ಗುರುಗಳಾಗಿಯೇ ದೊರೆಯಲಿ" ಎಂದು ಹನುಮ ಭೀಮ ಮಧ್ವಾಂತರ್ಯಾಮಿ ಅನಂತಗುಣ, ರೂಪ, ಕ್ರಿಯಾತ್ಮಕ ಅನಂತ ದಯಾ ಕ್ಷಮಾ ಕೃಪಾರೂಪ ಶ್ರೀಮನ್ನಾರಾಯಣನಲ್ಲಿ ಪ್ರಾರ್ಥಿಸೋಣ.....

"ಆಚಾರ್ಯಾಃ ಶ್ರೀಮದಾಚಾರ್ಯಾಃ ಸಂತು ಜನ್ಮನಿ ಜನ್ಮನಿ........"..
"ಜಯತಿ ನಾರಾಯಣ ಸೂನುಃ"

(Contributed by Dr Manjunath Gururaja - Bannanje Balaga)

No comments:

Post a Comment

ಗೋ-ಕುಲ Go-Kula