Sunday 5 February 2017

ವಿಶ್ವಮತ ಕೊಟ್ಟ ವಿಶ್ವಗುರು - “ತ್ರಿವೇಣಿ ತನಯ”

ವಿಶ್ವಮತ ಕೊಟ್ಟ ಏಕೈಕ ವಿಶ್ವಗುರು ಮಧ್ವಾಚಾರ್ಯ,
ಧಾರ್ಮಿಕ ವೈಜ್ಞಾನಿಕ ಸಮ್ಮತ ಸೂತ್ರ ಕೊಟ್ಟ ಆರ್ಯ,
ಸಕಲ ಚೇತನ ಜಡ ಸರ್ವಾಂತರ್ಯಾಮಿ ಭಗವಂತನೆಂದ,
ಸಕಲ ಚರಾಚರ ವಸ್ತು ನಾದ ವೇದಗಳು ಅವನ ನಾಮವೆಂದ,
ದೇವತೆಗಳು ಅನೇಕ ನಿಯಾಮಕ ದೇವ ಒಬ್ಬನೇ ಎಂದ,
ಯಾರನ್ನೇ ಪೂಜಿಸು ಎಲ್ಲರಂತರ್ಯಾಮಿ ನಾರಾಯಣನೆಂದ,
ಭಗವದ್ ಹಿರಿಮೆ ನಮ್ಮ ಸೀಮೆ ಅರಿತು ಬಾಳಿದರೆ ಭೂಮಿ ನಾಕ,
ಅಜ್ಞಾನದ ಬೇಲಿಕಟ್ಟಿಕೊಂಡು ನಾವು ಮಾಡಿಕೊಂಡಿದ್ದೇವೆ ನರಕ.

ಮೊದಲೆರಡು ಅವತಾರಗಳಲ್ಲಿ ಶಕ್ತಿ ಜ್ಞಾನಗಳ ಮೇಳ,
ಮೂರನೆಯದಾದರೋ ಜ್ಞಾನ ಪ್ರಸಾರದ್ದೇ ಆಳ,
ವ್ಯಾಸಪೂಜೆಗೆಂದೇ ಅವತರಿಸಿದ ಶ್ರಿಮದಾಚಾರ್ಯ,
ಇಪ್ಪತ್ತೊಂದು ತರಿದು ತತ್ವವಾದ ಕೊಟ್ಟ ಮಧ್ವಾಚಾರ್ಯ.

ಪಾಜಕದಲಿ ಅವತರಿಸಿದ ದಶಪ್ರಮತಿ,
ಕುಮತಗಳ ಖಂಡಿಸಿದ ಪೂರ್ಣಪ್ರಮತಿ,
ಸಹಜ ಸರ್ವಕಾಲಿಕ ಸಿದ್ಧಾಂತ ಎತ್ತಿ ತೋರಿದ,
ಶಿಸ್ತಿನಿಂದ ವ್ಯಾಸಪೂಜೆ ಸಲ್ಲಿಸಿ ಕೃಷ್ಣಾರ್ಪಣವೆಂದ.

ಪಾಜಕದಲ್ಲಿ ಉದಯಿಸಿತು ನಿಜಜ್ಞಾನ ಸೂರ್ಯ,
ಆಮೇಲೆ ಕರೆಸಿಕೊಂಡಿದ್ದು ಶ್ರೀಮಧ್ವಾಚಾರ್ಯ,
ಹೆತ್ತವರಿಟ್ಟ ಹೆಸರದು  ವಾಸುದೇವ,
ಹನುಮ ಭೀಮರ ನಂತರ ಬಂದ ಪ್ರಾಣದೇವ.

ಬಾಲ್ಯದಿಂದಲೇ ತೋರಿದ ಅನೇಕ ವಿಸ್ಮಯಗಳ,
ತಂದೆ ತಾಯಿಗಳಿಗೆ ಏನೋ ವಿಚಿತ್ರ ಕಳವಳ,
ಆಡಾಡುತಲೇ ನಿವಾರಿಸಿದ ಮಾಯಾವಾದದ ಗೊಂದಲ,
ನೈಜ ಸಾಧಕರಿಗೆ ತಿಳಿಸಿ ತೋರಿದ ನಿಜ ಹಂಬಲ.

ಪಂಚಭೇದಗಳ ಪ್ರಪಂಚದಲಿ ಎಲ್ಲವೂ ಒಂದಲ್ಲವೆಂದ,
ಒಂದರಂತೆ ಒಂದಿಲ್ಲ ಅದೇ ಸೃಷ್ಟಿಯ ನಿಯಮ ನೋಡೆಂದ,
ತತ್ವವಾದದ ತಾರತಮ್ಯವ ತಿಳಿಸಿ ದಾರಿ ತೋರಿದ ಧೀರ,
ಜಗದ ಮಾತಾಪಿತರ ಪ್ರೀತಿಪಾತ್ರ ನಿರವದ್ಯ ಕುಮಾರ.

ಸಮ ಯಾರೋ ಮಧ್ವಮುನಿರಾಯಾ,
ಸಚ್ಛಾಸ್ತ್ರ ತೋರಿದ ಯತಿ ಮಹರಾಯ,
ಸತ್ಯ ಜಗದೊಳಿಹ ನಿತ್ಯಭೇದವ ತೋರಿದೆ,
ಸಮಸ್ತವೂ ಸತ್ಯಸಂಕಲ್ಪನ ಅಧೀನವೆಂದೆ.

ಮಧ್ವರವತಾರದಿಂದ ಪರಕಾಶಿಸಿತು ಬಾನು,
ಸಾಧಕರಿಗೆ ತತ್ವವಾದವಿತ್ತ ಸುರ ಕಾಮಧೇನು,
ಅತಂತ್ರವಾದಗಳ ಕತ್ತಲೆ ಓಡಿಸಿದ ಏಕೈಕ ಧೀರ,
ಲಕ್ಷ್ಮೀನಾರಾಯಣರ ಅಚ್ಚುಮೆಚ್ಚಿನ ಪ್ರಿಯ ಕುವರ.

ಹನುಮನೆತ್ತರಕೆ ಏರಿ ಹಾರಿದವರುಂಟೇ,
ಜೀವೋತ್ತಮನೆಂದು ಭೀಮ ಬಡಿದ ಗಂಟೆ,
ಮಧ್ವರಾಗಿ ಬಂದು ತತ್ವವಾದ ಕೊಟ್ಟದ್ದು ಇತಿಹಾಸ,
ಬೆಂಬಿಡದೆ ಅನುಸರಿಸುತಿರುವ ನಂದಿತೀರ್ಥರ ರಾಯಸ.

ಮಧ್ವನವಮಿಯಸಂಭ್ರಮ,

ಅರ್ಪಿತ ನವ ಪದ್ಯ ಸುಮ.


(Contributed by Shri Govind Magal - Bannanje Balaga)

No comments:

Post a Comment

ಗೋ-ಕುಲ Go-Kula