Sunday 3 July 2016

Sāra Saṅgama 32

ಸಾರ ಸಂಗಮ  by “ತ್ರಿವೇಣಿ ತನಯ

ತಿಳಿ ಕೊಳ

ಕೋಪವದು ಕೊಳಕಿನ ಸಂಕೇತ,
ನಿರ್ಲಿಪ್ತ ಮನ ಕೋಪದಿಂದ ಮುಕ್ತ,
ಶುದ್ಧ ಮನವದು ಕದಡದ ಕೊಳ,
ಪಾರದರ್ಶಕವಿರೆ ತಿಳಿದೀತು ಆಳ.

ಜ್ಞಾನ-ಎಲ್ಲೆಡೆ ಸಲ್ಲುವ ಆಭರಣ

ಭಾರವೆತ್ತುವವಗೆ ಭಾರವೇನು ಲೆಕ್ಕ?
ಕಠಿಣ ಪರಿಶ್ರಮಿಗೆ ಗೆಲುವದು ಪಕ್ಕಾ,
ನಿಜ ಜ್ಞಾನಿಗೆ ಯಾವ ದೇಶವಾದರೇನು?
ಎಲ್ಲರನೂ ಪ್ರೀತಿಸುವವ ಎಲ್ಲಿದ್ದರೇನು!

ಜೀವನ ಜಾತ್ರೆ -ಶಿಸ್ತಿನ ಮಾತ್ರೆ

ಜಗತ್ತೇ ಜೀವಿಗಳು ಬಂದು ಹೋಗುವ ಜಾತ್ರೆ,
ನಿಲ್ಲದೇ ನಡೆದಿದೆ ಸೂರ್ಯನ ಶಿಸ್ತಿನ ಯಾತ್ರೆ,
ಅದೇ ಸೂರ್ಯ ಸಂಜೆ ಸಾಗರ ನುಂಗುವ ಮಾತ್ರೆ,
ಜೀವಿಗಳಿಗಿರಲಿ ಶಿಸ್ತು-ತುಂಬಲಿ ಸಾಧನಾ ಪಾತ್ರೆ.

ಅಂತರಂಗದ ಕದ-ನಿರ್ಲಿಪ್ತತೆಯ ಹದ

ಅಂತರಂಗದ ಕದವ ತೆಗೆವುದೆಂತು?
ನಿರ್ಲಿಪ್ತ ಮನವಿರೆ ಬೀಗದ ಕೈ ಸಿಕ್ಕೀತು,
ನಿರ್ಲಿಪ್ತತೆಗಾಗಿ ವ್ಯಾಮೋಹ ಕಳಚಲಿ,
ಬರುವುದೆಲ್ಲಾ ಬರಲಿ ಅಂಟದಂತಿರಲಿ.

ತಿಳಿದೆನೆಂದು ಅಳಿಯಬೇಡ

ತಿಳಿದೆ ತಿಳಿದೆ ಅಂದರೆ ಅಳಿದೆನೆಂದೇ ಅರ್ಥ,
ತಿಳಿದೆ ಎಂದು ಹೊರಟರೆ ತಿಳಿದದ್ದೆಲ್ಲವೂ ವ್ಯರ್ಥ,
ಸಾಗರದ ಆಳ-ಅಗಲವನು ಅಳೆದವರುಂಟೇ?
ಎಣೆಯಿಲ್ಲದ ಜ್ಞಾನಭಂಡಾರ ಕೈಗೆಟುದ ಗಂಟೇ!


(Contributed by Shri Govind Magal)

No comments:

Post a Comment

ಗೋ-ಕುಲ Go-Kula