Monday 29 February 2016

Bhava Guccha 34

ಭಾವ ಗುಚ್ಛ  by “ತ್ರಿವೇಣಿ ತನಯ


ಆತ್ಮ ಚರಿತ್ರೆ

ಮೊದಲ "ಆತ್ಮ"ಅವತಾರಗಳ ಚರಿತ್ರೆ ಬರೆದು ಕೊಟ್ಟವನು ವೇದವ್ಯಾಸ,
ಅರ್ವಾಚೀನರೆಲ್ಲರದೂ ಆತ್ಮಪ್ರಶಂಸೆಯ ವಿರೋಧಾಭಾಸ,
ಲೌಕಿಗರೆಲ್ಲರದು ಪ್ರತಿಷ್ಠೆ ಪ್ರಚಾರದ ಕೀಳು ಚಪಲ,
ಹರಿಯ ಉದ್ದೇಶವಾದರೋ "ಸಮ"ಗತಿ ಕೊಡುವ ಜಾಲ.

ವಿಷ್ಣು ಧರ್ಮ

ವಿಷ್ಣುಧರ್ಮದ ಪ್ರಾರಂಭದಿಚ್ಛಮಾತ್ರವೂ ನಿಷ್ಫಲವಲ್ಲವಂತೆ,
ಪ್ರಾಮಾಣಿಕ ನಡೆಯಿರುವವರಿಗೆ ದೂರ ಸಂಸಾರ ನೋವು ಚಿಂತೆ,
ಕರ್ಮಾನುಸಾರ ಪಾಪಗಳ ನಿವಾರಿಸುವ ತೋರಿ ಕಾರ್ಮೋಡದ ನೆರಳು,
ಶಿಕ್ಷೆ ಕೊಂಚಮಾಡಿ ಎಚ್ಚರಿಸಿ ಸನ್ಮಾರ್ಗದಲ್ಲಿರಿಸುವ ನೀನೆಷ್ಟು ಕರುಣಾಳು.

ತಾರಕ -ಚುಟುಕ

ಚುಟುಕ ಚಿಟಿಕೆಯಲಿ ಮನ ಮುಟ್ಟಬೇಕು,
ದುರಿತಗಳ ಕುಟ್ಟಿ ಕುಟ್ಟಿ ಅಟ್ಟಬೇಕು,
ಸುಜನರ ಮನದ ಕದ ತಟ್ಟಬೇಕು,
ಹರಿಪಾದದಲಿ ಮನವ ಕಟ್ಟಬೇಕು.
ಸಹಜ ಸ್ಫುರಣವದು ಹುಟ್ಟಬೇಕು,
"ನಾನು ನನ್ನದು"ಅಳಿಸಿ ಮೆಟ್ಟಬೇಕು,
ಕೊಡು ಇದಕೆ ಜ್ಞಾನ ಬೆಟ್ಟ ಬೇಕು,
ಶರಣ ಸ್ಮರಣವ ಕೊಟ್ಟು ನೀ ಮುಟ್ಟಬೇಕು.

ಸುಪ್ರಭಾತ

ಉದಯಿಸುವ ಸೂರ್ಯ ಹಕ್ಕಿಗಳ ಸುಪ್ರಭಾತ,
ತಂದನು ಹೊಸದೊಂದು ದಿನ ನಿನ್ನೆಯ ಹಿಂದಿಕ್ಕಿ ಆತ,
ಕೋಳಿಯೂ ಕೂಗುತಿದೆ ಬೆಳಗಾಯ್ತು ಏಳು,
ನಿರ್ಮಲ ಮನವಿರೆ ಪ್ರತಿದಿನವೂ ಹಣ್ಣಿನ ಹೋಳು.


(Contributed by Shri Govind Magal)

Sunday 28 February 2016

Bhava Guccha 33

ಭಾವ ಗುಚ್ಛ  by “ತ್ರಿವೇಣಿ ತನಯ

ಚಂಚಲ ಮನ

ಹಿಡಿವ ಸಾಹಸವ ಮಾಡದಿರು ಮನವನ್ನು,
ಹರಿಯ ಬಿಡದನು ಸೇರುವುದೊಂದು ತಾಣವನು,
ಅದು ನಿಂತಲ್ಲೇ ನಡೆವ ಹರಿವ್ಯಾಪಾರ ಗುರುತಿಸು,
ನಡೆದಿರುವುದೆಲ್ಲ ನಿನ್ನ ಪೂಜೆಯೆಂದರ್ಪಿಸು,

ವೈರಾಗ್ಯ -ತಾಳ್ಮೆ

ನಿರ್ಲಿಪ್ತನಾಗದೇ ಸುಮ್ಮನೇ ಬಂದೀತೇ ವೈರಾಗ್ಯ?
ಅಂಟದೇ ಬದುಕುತಿರು ಬಿಡದೇ ಸತಿಸುತರ ಭಾಗ್ಯ,
ಕರ್ತವ್ಯವೇ ಪೂಜೆಯೆನುತ ಬಂದದ್ದು ಒಪ್ಪಿಕೋ,
ತಾಳ್ಮೆಗಿಂತ ಅಧಿಕ ತಪವಿಲ್ಲ ಕೊಂಚ ತಾಳಿಕೋ.

ಬೇಕು -ಸಾಕು

ಜ್ಞಾನ- ಅದಕ್ಕೆ ಪೂರಕವಾದದ್ದು ಬೇಕು,
ಅದಲ್ಲದ ಲೋಕ ವಾರ್ತೆಯದು ಸಾಕು,
ಯಾರನ್ನೂ ನೋಯಿಸುವುದು ಬೇಡ,
ಆಗಲೆತ್ನಿಸೋಣ ಜ್ಞಾನನೇಯುವ ಜಾಡ,
ಯಾಕೆ ಬೇಡ ಅರ್ಥಹೀನ ಗೊಂದಲ,
ಎಲ್ಲರೂ ಇರಲೆತ್ನಿಸೋಣ ನಿರ್ಮಲ.

ಕರ್ಮ -ಮರ್ಮ

ಗಾಣದೆತ್ತಾಗದಿರು ಕರ್ಮಕ್ಕಾಗಿ ಅಲ್ಲ ಕರ್ಮ,
ಧ್ಯಾನಿಸಿ ಮಥಿಸಿ ಹಿರಿತತ್ವವ ತಿಳಿವುದೇ ಮರ್ಮ,
ಜೀವರಿಂದಾಗುವ ಸಕಲ ಕರ್ಮಕೂ ಅವನೇ ನಿಯಾಮಕ,
ಇದನರಿತು ಶರಣಾಗುವ ಜೀವನವದು ಸಾರ್ಥಕ.

ಪ್ರಾರಬ್ಧ

ಅರ್ಥವಾಗದು ಲೋಕದ ವಿಚಿತ್ರ ವ್ಯಾಪಾರ,
ಆಡಿಸುವ ಆಟವದು ಕಾಣದ ಸೂತ್ರಧಾರ,
ಒಬ್ಬರ ಸತ್ಯವದು ಇನ್ನೊಬ್ಬರಿಗೆ ಮಿಥ್ಯ ,
ಸಹಿಸಲೇಬೇಕು "ಪ್ರಾರಬ್ಧ"ವೀವ ಆತಿಥ್ಯ.


(Contributed by Shri Govind Magal)

Saturday 27 February 2016

Bhava Guccha 32

ಭಾವ ಗುಚ್ಛ  by “ತ್ರಿವೇಣಿ ತನಯ

ಕಾಲ -ಕಂಡವರು -ಕಾಣದವರು

ಪರೀಕ್ಷಿತಗಿದ್ದದ್ದು ದಿನ ಏಳು ,
ಶುಕರುಪದೇಶಿಸಿ ಹರಸಿದರು-ಏಳು,
ಖಟ್ವಾಂಗ ರಾಜಗಿದ್ದದ್ದು ಅತ್ಯಲ್ಪ ಕಾಲ.
ಅದರಲ್ಲೇ ಸಾರ್ಥಕ ಮಾಡಿಕೊಂಡ ಬಾಳ,
ನಮಗಾದರೋ ಕಾಲದ ಪರಿವೂ ಇಲ್ಲ,
ಕಾಣದವನ ಪರಿಚಯವೂ ಬೇಕಿಲ್ಲ,
ನಡೆ ಸರಿಯೇ ಎಂದು ಅಂತರಂಗವ ಕೇಳು,
ಇನ್ನಾದರೂ ನಿಜ ಮಾನವನಾಗಿ ಬಾಳು.

ಮುಖ್ಯವಾಗವವು ಬದುಕಿದಾ ವರ್ಷ,
ಸವಿದದ್ದು ಹಂಚಿದ್ದು ಎಷ್ಟು ನೀ ಹರ್ಷ,
ಬಂಗಾರ ಭೂಮಿ ಹಣ ಎಷ್ಟಿದ್ದರೇನು?
ಹಸಿವೆಗೇ ಅನ್ನವಲ್ಲಡೇ ಚಿನ್ನ ತಿನ್ನುವೆ ಏನು?

ಅನ್ನ -ಜ್ಞಾನ

ಹೊಟ್ಟೆ ಹಸಿವೆಗೆ ಅನ್ನ ತಲೆ ಹಸಿವೆಗೆ ಜ್ಞಾನ,
ಹೊಟ್ಟೆ ಹಸಿವು ಸೀಮಿತ ಜ್ಞಾನದ್ದು ದೂರದಯಾನ,
ಹಂಚುತಿದ್ದರೂ ಬೆಳೆದು ಬೆಳಕನೀವ ಸಾಧನ,
ಜನ್ಮಾಂತರಕೆ ಹರ್ಷವೀವ ಮುಕ್ತಿಗೊಯ್ವ  ಸೋಪಾನ.

ಕಾಣದ ಸತ್ಯ
ಜಗದೊಳಗೆ ಕಾಣುವುದಷ್ಟೇ ಸತ್ಯವಲ್ಲ ,
ಗಾಳಿ ಘ್ರಾಣ ರುಚಿ ಶಾಖಗಳೇಕೆ ಕಾಣ್ತಿಲ್ಲ,
ಅರಿತು ಅನುಭವಿಸಲು ಬೇಕು ಅಂತಃಶಕ್ತಿ,
ನಿರಾಕರಿಸದಿರು ಉಂಟೊಂದು ನಿಯಂತ್ರಕ ಶಕ್ತಿ.


(Contributed by Shri Govind Magal)

Wednesday 24 February 2016

Bhava Guccha 31

ಭಾವ ಗುಚ್ಛ  by “ತ್ರಿವೇಣಿ ತನಯ



ಗುರುವಂದನೆ

ಆಚಾರ್ಯ ಬನ್ನಂಜೆ ಅದ್ಭುತ ಅಧ್ಯಾತ್ಮ ಕವಿ,
ಅನುಭವದ ಮಂಥನಗಳ ಮೆಟ್ಟಿಲೇರಿದ ಅನುಭಾವಿ,
ಆಚಾರ್ಯ ಮಧ್ವರ ಪುರ್ಣಾನುಗ್ರಹದ ಅಂತರಂಗ ಭಕ್ತ,
ತತ್ವವಾದದ ತಿರುಳ ಬಗೆದು ಮೊಗೆದುಣಿಸುವಲ್ಲೇ ಆಸಕ್ತ,
ಹೃದಯಾಂತರಾಳದ ಒಂದೊಂದು ಮಾತೂ ಅದೆಷ್ಟು ಸವಿ,
ದುರ್ಮತ ದುರ್ವಾದಗಳ ಕತ್ತರಿಸೆಸೆಯುವ ಪವಿ.

ಆಚಾರ್ಯರಲ್ಲಿ ಕುಳಿತು ನುಡಿಸುವ ಭಗವಂತ,
ಕೇಳುಗನಲ್ಲಿದ್ದು ಕೇಳಿದಾಗಷ್ಟೇ ವರ್ಣನಾತೀತ,
ತೊಳೆವುದದು ಜನ್ಮಾಂತರದ ಕೊಳೆ,
ಹಸನಾದೀತು ಸಾಧನಾಂಕುರಕೆ ಮನವೆಂಬ ಇಳೆ.

ಮಗುವಿನಂಥಾ ಮುಗ್ಧ ನಗು,
ನಂಬಿದವರ ದುಗುಡ ಕಳೆವ ನಗು,
ಕುಹಕಿಗಳ ಚೇಷ್ಟೆ ಕಡಿವ ಅಲಗು,
ಅವರವರ ದೃಷ್ಟಿಯಂತೆ ಕಾಣುವ ದೈವೀ ಸೊಬಗು.

ಬನ್ನಂಜೆಯವರ ಬದುಕು ಮಧ್ವಮತಕೆ ಮೀಸಲು,
ತಿಳಿಸಿ ಹೇಳುವರುಂಟೆ ಸಮನ್ವಯಿಸಿ ಪ್ರತಿಸಾಲು,
ಬೀರುತಿದೆ ಶ್ರೀಗಂಧ ಸವೆಸವೆದು ತಾನು,
ಮಧ್ವ ಮಾನಸ ಕೊಳದಲಿ ಮುಳುಗೇಳುವ ಮೀನು.

ಸಾಮಾನ್ಯನಲ್ಲ ಈ ಗೃಹಸ್ಥ,
ಕೃಷ್ಣ ಮಧ್ವರ ನಡುವಿನ ಮಧ್ಯಸ್ಥ,
ಜ್ಞಾನ ಅನುಭವಗಳ ಭಂಡಾರ,
ಅಪರೂಪದ ಚೊಕ್ಕ ಬಂಗಾರ.


(Contributed by Shri Govind Magal)

Tuesday 23 February 2016

Bhava Guccha 30

ಭಾವ ಗುಚ್ಛ  by “ತ್ರಿವೇಣಿ ತನಯ


ಅಧ್ಯಾತ್ಮದ ಗೀಳು

ಏನೇ ಬರಲಿ ಸಂಸಾರದೇಳು ಬೀಳು,
ತಪ್ಪದಿರಲಿ ಅಧ್ಯಾತ್ಮ ಚಿಂತನದ ಗೀಳು,
ಕೊಡುತಿರು ನಿನ್ನ ಸ್ಮರಣೆ ಮನಕೆ ಸತತ,
ಆಗದಿರಲಿ ಲೌಕಿಕ ಸೆಳೆತಗಳಿಗೆ ಮನಃಪಾತ.

ಮಾಯೆಯೆಂಬ ಮೋಸ

ಅದ್ಹೇಗೆ ಹೇಳುವರೋ ಜಗವೆಲ್ಲ ಮೋಸ,
ಅನುಭವದಿ ಇರುವುದ ಇಲ್ಲೆಂಬ ಪ್ರಯಾಸ,
ಮಿಥ್ಯವಲ್ಲವಿದು ಸತ್ಯ-ಆದರೂ ಅಲ್ಲ ಶಾಶ್ವತ,
ಬಿಡಿಬಿಡಿಸಿ ತಿಳಿಸುತಿದೆ ನಂದಿತೀರ್ಥರ ಮತ.

ಜಾತಿ -ನೀತಿ

ದುಂಬಿಯದು ನೋಡುವುದೆ ಹೂವಿನಾ ಜಾತಿ,
ಮಕರಂದ ಹೀರುವುದೇ ಅದರ ನಿರಂತರ ಗತಿ,
ಯಾರಾದರೇನು ಹೀರಿಕೊಳ್ಳುತ್ತಿರು ಜ್ಞಾನ,
ಸಾಕ್ಷಾತ್ಕಾರಕೆ ಅದುವೆ ಪ್ರಮುಖ ಸೋಪಾನ.

ಅಂತರ್ಯಾಮಿ

ಪ್ರತಿ ಜೀವಿಗಳಲ್ಲಿರುವ ಅಂತರ್ಯಾಮಿ ಕೇಶವ,
ಇದನರಿಯದ ಜೀವಿ ತಾನೊಂದು ಜೀವಂತ ಶವ,
ಅವರವರಲ್ಲಿ ನಿಂತು ಮಾಡಿಸುವ ಸಾಧನವ ತಾನು,
ಅವನ ವ್ಯಾಪಾರ ಒಪ್ಪಿ ಶರಣಾಗು ಪಾರಾಗುವಿ ನೀನು.

ಹಾವು ಏಣಿ ಆಟ

ಇಟ್ಟಿರುವೆ ಸಾವು-ಬದುಕುಗಳ ಹಾವು ಏಣಿಯಾಟ,
ನೆಟ್ಟಿರುವೆ ಜೀವಿಗಳ ಮನ-ಭ್ರಮೆ ವಾಂಛೆಗಳತ್ತ ನೋಟ,
ಪಾರಾಗುವುದೆಂತು ಕಳಚಿ ಭಾರೀ ಸೆಳೆತಗಳ ಕಾಟ,
ಮನತೊಳೆಯೆ ಕೊಳೆಕಳೆಯೆ ಬೀರು ಕಾರುಣ್ಯದಾ ನೋಟ.


(Contributed by Shri Govind Magal)

Monday 22 February 2016

Bhava Guccha 29

ಭಾವ ಗುಚ್ಛ  by “ತ್ರಿವೇಣಿ ತನಯ


ಶುಷ್ಕ ಕರ್ಮ

ಕರ್ಮದಲೇ ತೊಳಲದಿರು ಜ್ಞಾನ ಹೀರುತಲಿರು,
ಶುಷ್ಕ ಕರ್ಮವ ತೊರೆದು ಹರಿಸ್ಮರಣೆ ತೊರೆ ಸೇರು,
ದಣಿಯದಲೆ ಛಲದಿಂದ ಶುದ್ಧ ಜ್ಞಾನ ಭಕುತಿಯ ಕೋರು,
ನಿನ್ನೆದೆಯೊಳಗೆ ಹುಡುಕುತಿರು ಕೃಷ್ಣ ಕುಳಿತಿಹ ತೇರು.

ಅಗಣಿತನ ಆಳ ವಿಸ್ತಾರ

ಬ್ರಹ್ಮಾದಿದೇವತೆಗಳಿಗೂ ತಿಳಿದಿಲ್ಲ ಅವನ ಆಳ ವಿಸ್ತಾರ,
ಮಾತೆ ಮಾಯೆಗೂ ತಿಳಿಯದು ಅವನ ಮಹಿಮೆ ಅಪಾರ,
ಎಣಿಸುತಿಹಳಂತೆ ಲಕುಮಿ ಅವನ ಪಾದ ಧೂಳು ,
ತರ್ಕಿಸದೇ ಶರಣಾಗು ನೀನವ ಕಳಿಸಿದ ಕೂಲಿ ಆಳು.

ಮಡಿ -ಮೈಲಿಗೆ

ಅಪಾರ ಬಂಧು ಬಳಗವ ಕೊಟ್ಟೆ,
ಮಧ್ಯದಲಿ ಮಡಿ-ಮೈಲಿಗೆ ತಂದಿಟ್ಟೆ,
ಮಡಿ ಮೈಲಿಗೆಯ ಅಳೆವುದ್ಯಾವ ಮಾಪನ?
ಸರ್ವಜ್ಞನವನೇ ನಡೆಸಿಹ ಅವರವರ ಸಾಧನ!

ಸ್ಫುರಣೆ -ಕರುಣೆ

ಹೊಳೆವ ಚಿಂತನೆ ಚಿಮ್ಮಿ ಬರುವ ಸ್ಫುರಣೆ,
ಒಳಗಿದ್ದಾಡುವ ಅಂತರ್ಯಾಮಿಯ ಕರುಣೆ,
ಹೇಗೇ ಇಡು ಕೃಷ್ಣ ಜ್ಞಾನದ ಹಸಿವು ಕುಂದದಿರಲಿ,
ಮನ ಸಜ್ಜನ ಸಂಗಕೆ ಬಾಗಿ ಮೆತ್ತಿಕೊಂಡಿರಲಿ.

ಚಕ್ರಭ್ರಮಣ

"ನಾನು ನನ್ನದೆಂಬುದು"ಬಲು ದೊಡ್ಡ ಕಗ್ಗಂಟು,
ಎಂಥವರನೂ ಬಿಡದ "ಅಹಂ"ಕಾರದ ಗಂಟು,
ಅಂಟಂಟು ಸೇರಿ ಆಗುವುದು ಇಡಿಗಂಟು,
ಇಳಿಸಿಕೊಳ್ಳಲು ಮತ್ತೆ "ಚಕ್ರಭ್ರಮಣ"ಉಂಟು.

(Contributed by Shri Govind Magal)

Sunday 21 February 2016

Bhava Guccha 28

ಭಾವ ಗುಚ್ಛ  by “ತ್ರಿವೇಣಿ ತನಯ


ನಿನ್ನ ನೆಲೆ

ಕಿತ್ತುಬಿಡು ಆರ್ಭಟಿಸೋ ಆರು ಕೊಳೆಗಳ ಕಳೆ,
ದೃಢಗೊಳಿಸು ನನ್ನೆದೆಯದು ನೀ ಕುಳಿತಿಹ ನೆಲೆ,
ಏನೇನೇ ಬರುತಿರಲಿ ಸಂಸಾರದ ಏರುಪೇರಿನ ಅಲೆ,
ಕಡೆಗಣಿಸದಿರು ಈ ಜೀವ ನಿನ್ನ ಪಾದ ಸೇರುವ ಎಸೆಳೆ.

ಅನುಸಂಧಾನ

ಯಜಮಾನರ ಭಾರೀ ಪೂಜೆ ನಡೆದಿತ್ತು,
ಮಂತ್ರಘೋಷ ಘಂಟಾನಾದ ಮೊಳಗಿತ್ತು,
ಹೊರಬಾಗಿಲಿಂದ ಕೂಗು ಬಂದಿತ್ತು ಅಮ್ಮಾ ಅನ್ನ ಹಾಕು,
ಉತ್ತರ-ನೈವೇದ್ಯವಾಗಿಲ್ಲ ಮುಂದ್ಹೆಜ್ಜೆ ಹಾಕು,
ಬಾಯಲ್ಲಿ ಹೇಳುವುದು ನಿತ್ಯ ಅನುಸಂಧಾನ!
ಹಸಿದವಗಿತ್ತು "ಕೃಷ್ಣಾರ್ಪಣ"ವೆಂದಾಗಲಿಲ್ಲವೇ ನಿಜಸಾಧನ?

ಅಂಬಿಗ .

ಬಾಳ ಭವಸಾಗರದ ಅಂಬಿಗನು ನೀನು,
ನಿನ್ನನ್ನೇ ನೆಚ್ಚಿಕಾದಿರುವ ಪಯಣಿಗನು ನಾನು,
ತಂಗಾಳಿ ಸುಳಿಗಾಳಿ ಬಿರುಗಾಳಿಗಳ ಭಾರೀ ಅಲೆ,
ಯೋಗಕ್ಷೇಮದ ಹೊಣೆಹೊತ್ತ ನೀನೇ ಸೇರಿಸು ನೆಲೆ.

ನಿತ್ಯ ಯಜ್ಞ .

ಉಸಿರಾಟವದು ತಿದಿಯಾಗದಿರಲಿ,
ಪ್ರಾಣ ಜಪಿಸುವ ಮಂತ್ರವೆಂಬರಿವಿರಲಿ,
ತಿನ್ನುವುದು ಉಣ್ಣುವುದು ಬರೀ ಊಟವಾಗದಿರಲಿ,
ವೈಶ್ವಾನರಗರ್ಪಿಸೋ ಚರುವು ಎಂಬರಿವಿರಲಿ,
ಬದುಕೆಂಬುದೊಂದು ಯಾಂತ್ರಿಕ ಓಟವಾಗದಿರಲಿ,
ಅವನಾಡಿಸುವ ಸಾಧನದಾಟ ಎಂಬ ನೋಟವಿರಲಿ.

ಪೀಕಲಾಟ .

ಕರ್ಮಾನುಷ್ಟಾನಗಳ ಆಚರಣೆ ಆಗುತಿದೆ ಪೀಕಲಾಟ,
ದೈವ-ಧರ್ಮ ಗುತ್ತಿಗೆ ಹಿಡಿದವರೊಂದಿಗೆ ಏಗುವುದು ಬಲು ಕಷ್ಟ,
ಪ್ರತಿ ಹಂತದಲ್ಲೂ ಅರ್ಥ ಅನುಸಂಧಾನಗಳ ತತ್ವಾರ,
ಎಲ್ಲರಲಿ ನಿಂತಾಡುವ ನೀನೇ ತೋರಬೇಕು ಪರಿಹಾರ.


(Contributed by Shri Govind Magal)

ಜ್ಞಾನದ ದಾರಿ - ಗೀತೆಯ ಬೆಳಕು

ಜ್ಞಾನದ ದಾರಿಯಲ್ಲಿ ಸಾಗಬೇಕಿದ್ದರೆ ನಮ್ಮ ನಡತೆಯಲ್ಲಿ ನಾವು ಅನುಸರಿಸಬೇಕಾದ ಕೆಲವು ನೀತಿ ಸಂಹಿತೆ(Code of Conduct)ಗಳಿವೆ. ಅದನ್ನು ನಾವು ಅನುಸರಿಸಬೇಕು. ನಾವು ನಮ್ಮ ಜೀವನದಲ್ಲಿ ಅನುಸರಿಸಬೇಕಾದ ಇಪ್ಪತ್ತು ಗುಣ(Discipline)ಗಳನ್ನು ಶ್ರೀಕೃಷ್ಣ ಗೀತೆಯಲ್ಲಿ ನೀಡಿದ್ದಾನೆ. ಈ ಗುಣಗಳಲ್ಲಿ ಪ್ರತಿಯೊಂದನ್ನು ನಮ್ಮ ಜೀವನದಲ್ಲಿ ಎಷ್ಟು ಹೆಚ್ಚು ಅಳವಡಿಸಿಕೊಂಡೆವೋ ಅಷ್ಟು ನಾವು ಜ್ಞಾನ ದಾರಿಯಲ್ಲಿ ಸಾಗಬಹುದು. ಇಲ್ಲದಿದ್ದರೆ ನಾವು ಅಜ್ಞಾನದ ದಾರಿಯಲ್ಲಿ ಸಾಗಬೇಕಾಗುತ್ತದೆ ಎಂದು ಕೃಷ್ಣ ಎಚ್ಚರಿಸಿದ್ದಾನೆ.

ಅಮಾನಿತ್ವಮಡಂಭಿತ್ವಮಹಿಂಸಾ ಕ್ಷಾಂತಿರಾರ್ಜವಮ್ ।
ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ   ॥೧೩-೭॥

ಇಂದ್ರಿಯಾರ್ಥೇಷು ವೈರಾಗ್ಯಮನಹಂಕಾರ ಏವ ಚ ।
ಜನ್ಮಮೃತ್ಯುಜರಾವ್ಯಾಧಿದುಃಖದೋಷಾನುದರ್ಶನಮ್  ॥೧೩-೮॥

ಅಸಕ್ತಿರನಭಿಷ್ವಂಗಃ ಪುತ್ರದಾರಗೃಹಾದಿಷು ।
ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೋಪಪತ್ತಿಷು   ॥೧೩-೯॥

ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ ।
ವಿವಿಕ್ತದೇಶಸೇವಿತ್ವಮರತಿರ್ಜನಸಂಸದಿ   ॥೧೩-೧೦॥

ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವಜ್ಞಾನಾರ್ಥದರ್ಶನಮ್ ।
ಏತಜ್ ಜ್ಞಾನಮಿತಿ ಪ್ರೋಕ್ತಮಜ್ಞಾನಂ ಯದತೋSನ್ಯಥಾ ॥೧೩-೧೧॥

(೧) ಅಮಾನಿತ್ವಮ್: ಜ್ಞಾನ ಗಳಿಸುವುದಕ್ಕಾಗಿ ನಾವು ಮಾನ-ಸಮ್ಮಾನದ ಬಯಕೆಯನ್ನು ಬಿಡಬೇಕು. ತನಗೆ ಸನ್ಮಾನವಾಗಬೇಕು, ಪ್ರಶಸ್ತಿ ಸಿಗಬೇಕು ಎನ್ನುವ ನಿರೀಕ್ಷೆಯಲ್ಲಿರುವವರಿಗೆ ಎಂದೂ ಜ್ಞಾನ ಸಿದ್ಧಿಯಾಗದು. ಅದಕ್ಕಾಗಿ ಪ್ರಚಾರಪ್ರಿಯತೆಯನ್ನು ನಾವು ಮೊದಲು ಬಿಡಬೇಕು. ಎಲ್ಲಾ ಪ್ರಚಾರಗಳಿಗೆ ತಿಲಾಂಜಲಿ ಕೊಟ್ಟು ಜ್ಞಾನದ ಬೆನ್ನು ಹತ್ತು. ಆಗ ಜ್ಞಾನ ದಕ್ಕುತ್ತದೆ. ಯಾರಾದರೂ ನಿನ್ನನ್ನು ಮೆಚ್ಚಿಕೊಂಡರೆ ಅದು ಅವರ ದೊಡ್ಡಸ್ತಿಕೆ. ಅಲ್ಲಿ ನಮ್ರತೆಯಿಂದಿರು.
(೨) ಅಡಂಭಿತ್ವಮ್ : ಎಲ್ಲರ ಮುಂದೆ ಸಣ್ಣವನಾಗಿ ಬದುಕಲು ಕಲಿ. ದೊಡ್ಡಸ್ತಿಕೆಯ ಪ್ರದರ್ಶನ ಬೇಡ. ಜ್ಞಾನ ಮಾರ್ಗದಲ್ಲಿ ಎಂದೂ ಪ್ರಾಮಾಣಿಕತೆಯಿಂದ ಅತ್ತ ಸರಿಯಬೇಡ. ಇಲ್ಲದ್ದನ್ನು ಇದೆ ಎಂದು ತೋರಿಸಲು ಹೋಗಬೇಡ.
(೩) ಅಹಿಂಸಾ : ಎಂದೂ ಇನ್ನೊಬ್ಬರನ್ನು ನೋಯಿಸಬೇಡ. ನಾವು ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸಿದರೆ ಅದನ್ನು ಮರಳಿ ವಾಸಿ ಮಾಡುವ ಯಾವ ಔಷಧವೂ ಇಲ್ಲ. ಆದ್ದರಿಂದ ಎಂದೂ ಇನ್ನೊಬ್ಬರನ್ನು ಮುಖಭಂಗ(Insult) ಮಾಡಬೇಡ. ಇನ್ನೊಬ್ಬರಿಗೆ ತೊಂದರೆ ಕೊಡದೇ ಇರುವುದು ಅಹಿಂಸೆ.
(೪)  ಕ್ಷಾಂತಿಃ :  ಪ್ರತೀಕಾರ ಮಾಡದೇ ಇರುವುದು. ಒಬ್ಬರು ನಮಗೆ ಕೇಡು ಬಗೆದಾಗ ನಾವು ಅದಕ್ಕೆ ಪ್ರತಿಕೇಡು ಬಗೆಯಲು ಹೋಗಬಾರದು. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಒಂದು ವ್ಯವಸ್ಥೆ ಇದೆ. ಲೌಕಿಕವಾಗಿ ನೋಡಿದರೆ, ಯಾರಾದರು ತಪ್ಪು ಮಾಡಿದಾಗ ಅವರಿಗೆ ಶಿಕ್ಷೆ ಕೊಡುವ  ಜವಾಬ್ಧಾರಿ ಆರಕ್ಷಕ ಮತ್ತು ನ್ಯಾಯಾಂಗ ವ್ಯವಸ್ಥೆಯದೇ ಹೊರತು ನಮ್ಮದಲ್ಲ. ಒಂದು ವೇಳೆ ನಾವು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಹೊರಟರೆ ಅದು ಕಾನೂನನ್ನು ಕೈಯಲ್ಲಿ ತೆಗೆದುಕೊಂಡ ಅಪರಾಧವಾಗುತ್ತದೆ. ಅದೇ ರೀತಿ ಭಗವಂತನ ರಾಜ್ಯದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಪ್ರತ್ಯೇಕ ವ್ಯವಸ್ಥೆ ಇದೆ. ಆದ್ದರಿಂದ ನಿನಗೆ ಪ್ರತೀಕಾರ ತೆಗೆದುಕೊಳ್ಳುವುದಕ್ಕಾಗಲೀಶಾಪ ಹಾಕುವುದಕ್ಕಾಗಲೀ ಹಕ್ಕಿಲ್ಲ.
ಈ ಮೇಲಿನ ಗುಣಗಳಿಗೆ ಉತ್ತಮ ದೃಷ್ಟಾಂತ ಜಡಭರತ ಮತ್ತು ರೈಕ್ವ ಮುನಿ. ಇವರ ಜೀವನ ಚರಿತ್ರೆಯನ್ನು ಓದಿದರೆ ಅವರು ಈ ಗುಣವನ್ನು ತಮ್ಮ ಜೀವನದಲ್ಲಿ ಹೇಗೆ ಪಾಲಿಸಿದ್ದರು ಎನ್ನುವುದು ತಿಳಿಯುತ್ತದೆ.
(೫) ಆರ್ಜವಮ್ : ಮುಖವಾಡವಿಲ್ಲದ ಬದುಕು. ನೇರ ನಡೆ ನುಡಿ. ಒಳಗೊಂದು ಹೊರಗೊಂದು ಇಲ್ಲದ ಪ್ರಾಮಾಣಿಕ ಬದುಕು(Sincerity-Straightforwardness).
(೬) ಆಚಾರ್ಯೋಪಾಸನಮ್: ಆಚಾರ್ಯ ಎಂದರೆ ಯಾವುದು ಸರಿ ಯಾವುದು ತಪ್ಪು ಎಂದು ಚೆನ್ನಾಗಿ ತಿಳಿದು ಅದನ್ನು ಆಚರಣೆಗೆ ತರುವವರು. ತಾವು ಸತ್ಯವನ್ನು ಕಂಡು, ಸಮಾಜದ ಮುಂದೆ ಅದನ್ನು ನಡೆದು ತೋರಿಸುವವರು. ಅಂಥವರ ಸೇವೆ ಮಾಡು. ಜ್ಞಾನಿಗಳು ಸುಲಭವಾಗಿ ಸಿಗುವುದಿಲ್ಲ ಮತ್ತು ಅವರು ಸಾಮಾನ್ಯವಾಗಿ ಪರೀಕ್ಷಿಸದೆ ಜ್ಞಾನ ಧಾರೆ ಮಾಡುವುದಿಲ್ಲ. ಏನೇ ಆದರೂ ಜ್ಞಾನಿಗಳ ಬೆನ್ನುಬಿಡಬೇಡ. ನಿನ್ನಲ್ಲಿರುವ ಜ್ಞಾನ ತೃಷೆ ಗಾಢವಾಗಿದ್ದಲ್ಲಿ ಖಂಡಿತವಾಗಿ ಅವರು ಜ್ಞಾನ ಧಾರೆ ಮಾಡುತ್ತಾರೆ. ಜ್ಞಾನ ಬೇಕಿದ್ದರೆ ಜ್ಞಾನಿಗಳು ತೆರೆದುಕೊಳ್ಳುವ ತನಕ ಕಾಯಬೇಕು. ಇದಕ್ಕೆ ಉತ್ತಮ ದೃಷ್ಟಾಂತ ಶ್ವೇತಕೇತು ಮತ್ತು  ಪ್ರಶ್ನೋಪನಿಷತ್ತಿನಲ್ಲಿ ಬರುವ ಪಿಪ್ಪಲಾದರ ಕಥೆ.
(೭) ಶೌಚಮ್: ಶೌಚ ಎಂದರೆ ಶುಚಿತ್ವ. ಕನ್ನಡದಲ್ಲಿ ಶೌಚಮ್ ಎಂದರೆ ‘ಮಡಿ’. ನಾವು ಮಡಿ ಮಾಡುವುದನ್ನು ಬಿಟ್ಟು ಮಡಿಯಾಗುವುದನ್ನು ಕಲಿಯಬೇಕು. ಸ್ನಾನ ಮಾಡಿ ಒದ್ದೆ ಬಟ್ಟೆ ಉಟ್ಟು ಯಾರನ್ನೂ ಮುಟ್ಟದೆ ಇದ್ದರೆ ಮಡಿಯಾಗಲು ಸಾಧ್ಯವಿಲ್ಲ.  ಶುಚಿ ಎನ್ನುವುದು ಮೂಲಭೂತವಾಗಿ ಮನಸ್ಸಿಗೆ ಸಂಬಂಧಪಟ್ಟದ್ದು. ಅದಕ್ಕೆ ಪೂರಕವಾಗಿ ದೇಹ ಶುದ್ಧಿ. ಪ್ರಾಪಂಚಿಕ ವಿಚಾರವನ್ನು ಮರೆತು, ಮನಸ್ಸನ್ನು ಭಗವಂತನಲ್ಲಿ ನೆಲೆ ನಿಲ್ಲಿಸುವುದು ಮಡಿ. ನಾವು ಕಾಯೇನ-ವಾಚಾ-ಮನಸಾ ಮಡಿಯಾಗಬೇಕು. ನಮ್ಮಲ್ಲಿ ಕೆಟ್ಟ ಯೋಚನೆ ಬಂದರೆ, ಕೆಟ್ಟ ಮಾತು ಬಾಯಲ್ಲಿ ಬಂದರೆ- ಆಗ  ನಾವು ಮೈಲಿಗೆ. ನಿಜವಾಗಿ ಕಾಯೇನ-ವಾಚಾ-ಮನಸಾ ಮಡಿಯಾಗಿರುವವ ಮೈಲಿಗೆಯವರೊಂದಿಗಿದ್ದರೆ  ಜೊತೆಗಿರುವವರೆಲ್ಲರೂ ಮಡಿಯಾಗಬಹುದು. ಇದನ್ನೇ ಹಿಂದೆ ‘ಪಂಕ್ತಿಪಾವನ’ ಎಂದು ಕರೆಯುತ್ತಿದ್ದರು. ಪೂರ್ಣ ಮಡಿಯಾಗಿರುವವ ಯಾವ ಪಂಕ್ತಿಯಲ್ಲಿ ಕುಳಿತನೋ ಆ ಪಂಕ್ತಿ ಮಡಿ. ಶಾಸ್ತ್ರ ಜ್ಞಾನವಿಲ್ಲದ ಮಡಿ ಮಡಿಯಲ್ಲ. ದೇವರ ಸ್ಮರಣೆ ಮನಸ್ಸಿನಲ್ಲಿ, ದೇವರ ನಾಮ ಬಾಯಿಯಲ್ಲಿ ಇದ್ದಾಗ ನಾವು ಮಡಿ.
ಮನಸ್ಸನ್ನು ಶುದ್ಧ ಮಾಡುವುದಕ್ಕೋಸ್ಕರ ಆಚಮನ ಮತ್ತು ಪ್ರಾಣಾಯಾಮ. “ಓ ಭಗವಂತಾನಿನ್ನ ಕಾರುಣ್ಯಧಾರೆಯಿಂದ ನನ್ನ ಸಹಸ್ರಾರದಿಂದ ಅಮೃತವನ್ನು ಕೆಳಕ್ಕೆ ಇಳಿಸಿ, ನನ್ನ ಇಡೀ ಮೈ ಪಾವನವಾಗುವಂತೆ ಮಾಡು. ನನ್ನೊಳಗಿನ ಎಲ್ಲಾ ಪಾಪಗಳೂ ಕೊಳೆಗಳೂ ಸುಟ್ಟು ತೊಳೆದುಹೋಗಲಿ” ಎನ್ನುವ ಅನುಸಂಧಾನದಿಂದಧ್ಯಾನಪೂರ್ವಕ, ಪಾಪಪುರುಷ ನಿರಸನ ಮಾಡಬೇಕು. ಇಲ್ಲಿ ನಮ್ಮ ತಲೆಯಿಂದ ಅಮೃತಧಾರೆ ಇಳಿದು ಬರುವುದನ್ನು ನಾವು ಅನುಭವಿಸಬೇಕು(Feel it). ಪ್ರಾಣಾಯಾಮದಿಂದ ನಮ್ಮೊಳಗಿನ ಎಲ್ಲಾ ಕೊಳೆ ಸುಟ್ಟು ಹೋಗುತ್ತದೆ. ನಮ್ಮ ಅಂಗಾಂಗದಲ್ಲಿ ಕೂತ ಭಗವಂತನ ಸ್ಮರಣೆಯೇ ಆಚಮನ. “ಓ ನೀರೇ, ನೀನು ಸುಖದ ಸೆಲೆ, ನೀನು ಸುಖದ ನೆಲೆ, ನಿನ್ನನ್ನು ಪ್ರೋಕ್ಷಿಸಿಕೊಳ್ಳುತ್ತಿದ್ದೇನೆ. ಆ ಭಗವಂತ ನನ್ನಲ್ಲಿ ಬಂದು ನೆಲೆಸುವಂತೆ ಮಾಡು” ಎಂದು ಪ್ರಾರ್ಥಿಸಿ ಪ್ರೋಕ್ಷಣೆಮಾಡಿಕೊಳ್ಳಬೇಕು. ಇದೆಲ್ಲವನ್ನೂ ನಾವು ತಿಳಿದು ಮಾಡಿದಾಗ ಮಾತ್ರ  ಮಡಿಯಾಗುತ್ತೇವೆ. ದೇವರನ್ನು ನೆನೆಯುವುದೇ ಮಡಿ. ದೇವರನ್ನು ಮರೆಯುವುದೇ ಮೈಲಿಗೆ. ಪುಂಡರೀಕಾಕ್ಷನ ಸ್ಮರಣೆ ಇಲ್ಲದೆ, ಅಂತರಂಗ ಶುದ್ಧಿ ಅಸಾಧ್ಯ.
(೮) ಸ್ಥೈರ್ಯಮ್ : ಮನಸ್ಸಿನ ಸ್ಥಿರತೆ(Conviction) ಸ್ಥೈರ್ಯ. ನಮಗೆ ನಮ್ಮದೇ ಆದ ಸ್ವಂತ ನಿರ್ಧಾರ ಬೇಕು. ಯಾರೋ ಹೇಳಿದಂತೆ ನಾವು ನಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುತ್ತಾ  ಗೊಂದಲಕ್ಕೊಳಗಾಗಬಾರದು. ನಾವು ನಮ್ಮ ತಲೆಯಲ್ಲಿ ಚಿಂತಿಸಬಲ್ಲವರಾಗಬೇಕು. ನಮಗೆ ಯಾವುದಾದರೂ ಪ್ರಶ್ನೆ ಬಂದರೆ ಅದಕ್ಕೆ ಉತ್ತರವನ್ನು ಕಂಡುಕೊಳ್ಳುವ ಸಾಮರ್ಥ್ಯ ನಮ್ಮ ತಲೆಯಲ್ಲೇ ಇರುತ್ತದೆ. “ಎಲ್ಲಿ ಪ್ರಶ್ನೆ ಇದೆಯೋ ಅಲ್ಲೇ ಉತ್ತರವೂ ಇರುತ್ತದೆ”. ಶಾಸ್ತ್ರವನ್ನು ಚೆನ್ನಾಗಿ ಅಧ್ಯಾಯನ ಮಾಡಿ ನೀನೇ ನಿನ್ನ ಸಮಸ್ಯೆಗೆ ಉತ್ತರ ಕಂಡುಕೊಂಡು ದೃಢವಾಗಿ ಕೆಲಸ ಮಾಡು. ಯಾರ ಯಾರೋ ಮಾತನ್ನು ಕೇಳಿ ಗೊಂದಲಗೊಳ್ಳದೆ ಸ್ಥೈರ್ಯವನ್ನು ಸಾಧಿಸು.  
(೯) ಆತ್ಮವಿನಿಗ್ರಹಃ : ಇಂದ್ರಿಯ ನಿಯಂತ್ರಣ(Self Control). ನಮ್ಮ ಇಂದ್ರಿಯ ನಮ್ಮ ಹಿಡಿತದಲ್ಲಿರಬೇಕು. ಇಂದ್ರಿಯ ಹಿಡಿತಲ್ಲಿರಬೇಕಾದರೆ ನಾವು ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಮನಸ್ಸಿನ ಕೈಯಲ್ಲಿ ನೀನು ಮಂಗನಾಗಬೇಡ, ಮನಸ್ಸನ್ನು ನೀನು ನಿಯಂತ್ರಿಸು. ಇದಕ್ಕಾಗಿ ನಿನ್ನ ಮನಸ್ಸನ್ನು ದೇವರಲ್ಲಿ ನೆಲೆ ನಿಲ್ಲಿಸು. ಹೀಗೆ ಮನೋನಿಗ್ರಹದಿಂದ ಇಂದ್ರಿಯ ನಿಗ್ರಹ ಸಾಧಿಸು.
(೧೦) ಇಂದ್ರಿಯಾರ್ಥೇಷು ವೈರಾಗ್ಯ : ಇಂದ್ರಿಯಗಳನ್ನು ಹೊರಪ್ರಪಂಚದತ್ತ ಹರಿಯದಂತೆ ತಡೆದು ಮನಸ್ಸನ್ನು ಭಗವಂತನಲ್ಲಿ ನೆಲೆ ನಿಲ್ಲಿಸುವುದು. ಇದನ್ನು ಶಮ-ಧಮ ಎನ್ನುತ್ತಾರೆ. ಇಂದ್ರಿಯಗಳು ಲೌಕಿಕ ವಿಚಾರದತ್ತ ಹರಿಯದಂತೆ ಮಾಡುವುದು ಧಮ ಮತ್ತು ಅದನ್ನು ಭಗವಂತನತ್ತ ಹರಿಯುವಂತೆ ಮಾಡುವುದು ಶಮ. ಭಗವಂತನ ಬಗ್ಗೆ ತಿಳಿದಾಗ ಇಂದ್ರಿಯ ಇನ್ಯಾವುದರ ಕಡೆಗೂ ಹರಿಯುವುದಿಲ್ಲ. ಪ್ರಾಪಂಚಿಕವಾದ ಶಬ್ದ, ಸ್ಪರ್ಶ, ರೂಪ, ರಸ, ಗಂಧದ ಬಗ್ಗೆ ವಿರಕ್ತಿ ತಾಳು. ಉದಾಹರಣೆಗೆ ನಾಲಿಗೆ ಚಪಲ. ನಮ್ಮಲ್ಲಿ ಕೆಲವರು ಮನೆಯಲ್ಲಿ ಯಾವ ರೀತಿ ಅಡಿಗೆ ಮಾಡಿದರೂ ಅಲ್ಲಿ ಅದು ಸರಿಯಾಗಿಲ್ಲ, ಇದು ಸರಿಯಾಗಿಲ್ಲ ಇತ್ಯಾದಿಯಾಗಿ ತಗಾದೆ ಎತ್ತುತ್ತಾರೆ. ಈ ರೀತಿಯ ಚಪಲವನ್ನು ಬಿಟ್ಟುಬಿಡು.  ಇಲ್ಲಿ ಬೇಕು ಬೇಡಗಳ ಆಯ್ಕೆ ಇಲ್ಲದೆ ಏನನ್ನು ಹಾಕಿದರೂ ಭಗವಂತನ ಪ್ರಸಾದ ಎಂದು ಸ್ವೀಕರಿಸುವುದನ್ನು ಕಲಿ. ಈ ರೀತಿ ಶಮ-ಧಮ ಸಾಧಿಸು. 
(೧೧) ಅನಹಂಕಾರ: ಇದು ಎಲ್ಲಾ ಗುಣಗಳಿಗಿಂತ ಶ್ರೇಷ್ಠ ಗುಣ. ನಮ್ಮಲ್ಲಿ ಯಾವ ಗುಣವಿದ್ದರೂ ಅದು ನಮ್ಮ ಅಹಂಕಾರದ ಮುಂದೆ ವ್ಯರ್ಥ. ಅಹಂಕಾರ(Ego) ನಮ್ಮಲ್ಲಿನ ಎಲ್ಲಾ ಗುಣವನ್ನು ನಾಶ ಮಾಡುತ್ತದೆ. ಅಹಂಕಾರವಿದ್ದೆಡೆ  ಉಳಿದ ಗುಣಗಳಿಗೆ ಅಸ್ತಿತ್ವವೇ ಇಲ್ಲ. ಆದ್ದರಿಂದ ಕೃಷ್ಣ ಅದನ್ನು ಇಲ್ಲಿ “ಏವ-ಚ” ಎಂದು ಒತ್ತಿ ಹೇಳಿದ್ದಾನೆ. ‘ನಾನು ವಿದ್ವಾಂಸ, ನಾನು ಅನುಷ್ಠಾನವಂತ, ನಾನು ಮಡಿ’ ಹೀಗೆ ನಮ್ಮನ್ನು ಅಹಂಕಾರ ಪ್ರತಿಯೊಂದು ವಿಚಾರದಲ್ಲೂ ಕಾಡುತ್ತದೆ. ಹೀಗೆ ನಾವು ಅಹಂಕಾರಪಟ್ಟರೆ ನಮ್ಮ ಅನುಷ್ಠಾನ-ಅನುಷ್ಠಾನವೇ ಆಗುವುದಿಲ್ಲ. ಎಲ್ಲಿ ಅಹಂಕಾರ ಕಾಡಿತೋ ಅಲ್ಲಿ ಸಾಧನೆ ವ್ಯರ್ಥವಾಗುತ್ತದೆ. ಎಲ್ಲಿ ಅಹಂಕಾರವಿರುತ್ತದೆ ಅಲ್ಲಿ ದೇವರಿರುವುದಿಲ್ಲ-ಅಂದರೆ ಅಹಂಕಾರದಿಂದಾಗಿ ನಾವು ದೇವರಿಂದ ದೂರ ಸರಿಯುತ್ತೇವೆ. ಈ ಕಾರಣದಿಂದ ‘ನಾನು ಮಾಡಿದೆ, ನನ್ನಿಂದಾಯ್ತು’ ಎಂದು ಬೀಗುವುದನ್ನು ಬಿಡು. ಭಗವಂತ ನನ್ನ ಕೈಯಿಂದ ಮಾಡಿಸಿದ ಎಂದು ಆತನಿಗೆ ಕೃತಜ್ಞತೆಯನ್ನು ತೋರು.
(೧೨) ಜನ್ಮ ಮೃತ್ಯು ಜರಾ ವ್ಯಾಧಿ ದುಃಖ ದೋಷ ಅನುದರ್ಶನಮ್:  ಜೀವನವನ್ನು ಒಳನೋಟದಿಂದ ನೋಡು. ಈ ಜೀವನ ಎನ್ನುವುದು ಹುಟ್ಟು ಸಾವು ಎನ್ನುವ ಎರಡು ದಡದ ನಡುವೆ ಹರಿಯುವ ಒಂದು ಪ್ರವಾಹ. ಈ ಪ್ರವಾಹದಲ್ಲಿ ವ್ಯಾಧಿ, ಮುಪ್ಪು, ದುಃಖ, ಶೋಕ ಎನ್ನುವ ಅಲೆಗಳ ಸರಮಾಲೆ. ಈ ನಮ್ಮ ಬದುಕಿನ ಉದ್ದೇಶವೇನುಭಗವಂತ ನಮ್ಮನ್ನು ಏಕೆ ಹುಟ್ಟಿಸಿದ, ಮಾನವ ಜನ್ಮವನ್ನು ಹೇಗೆ ಸಾರ್ಥಕ ಮಾಡಿಕೊಳ್ಳಬೇಕು ಎನ್ನುವ ಅನುದರ್ಶನ ಮಾಡು. ಆಹಾರ ನಿದ್ರಾ ಭಯ ಮೈಥುನ ಇಷ್ಟೇ ಜೀವನವಲ್ಲ. ಇದನ್ನು ಪ್ರಾಣಿಗಳೂ ಅನುಭವಿಸುತ್ತವೆ. ಆದ್ದರಿಂದ ಶಾಸ್ತ್ರವನ್ನು ಓದಿ ಸತ್ಯಕ್ಕೆ ಅನುಗುಣವಾದ ಯಥಾರ್ಥ ದರ್ಶನವನ್ನು ಮಾಡಿಕೋ. ಕೇವಲ ಲೌಕಿಕ ಸುಖದ ನಿರೀಕ್ಷೆಯಲ್ಲಿ ಬದುಕುವುದನ್ನು ಬಿಟ್ಟು-ಸತ್ಯದ ಸಾಕ್ಷಾತ್ಕಾರಕ್ಕಾಗಿ, ಭಗವಂತನನ್ನು ಸೇರುವುದಕ್ಕಾಗಿ ಬದುಕು. ಎಲ್ಲಾ ಲೌಕಿಕ ಸುಖ, ಸಂಪತ್ತು ನಿಸ್ಸಾರ. ಇದರಿಂದಾಚೆಗಿನ ಸಾರವಾದ ಭಗವಂತನನ್ನು ತಿಳಿದು ಅದರತ್ತ ಹೆಜ್ಜೆಹಾಕು.
(೧೩) ಅಸಕ್ತಿಃ : ‘ಸಕ್ತಿ’ ಎಂದರೆ ಹಚ್ಚಿಕೊಳ್ಳುವುದು ಅಥವಾ ಅಂಟಿಸಿಕೊಳ್ಳುವುದು(Attachment).  ನಮ್ಮೆಲ್ಲಾ ದುಃಖಕ್ಕೂ ಮೂಲಕಾರಣ ‘ಸಕ್ತಿ’. ಆದ್ದರಿಂದ ಯಾವುದನ್ನೂ ಅಂಟಿಸಿಕೊಳ್ಳಬೇಡ. ಹುಟ್ಟುವಾಗ ನಾವು ಏನನ್ನೂ ತಂದಿಲ್ಲ, ಸಾಯುವಾಗ ಯಾವುದನ್ನೂ ತೆಗೆದುಕೊಂಡು ಹೋಗುವುದಿಲ್ಲ. ಆದ್ದರಿಂದ ಲೌಕಿಕವಾದ ಈ ಸಕ್ತಿಯಿಂದ ದೂರ ನಿಲ್ಲು. ಬಂದದ್ದನ್ನು ಭಗವಂತನ ಪ್ರಸಾದವೆಂದು ಸ್ವೀಕರಿಸು, ಹೋದಾಗ ಭಗವಂತನ ಇಚ್ಛೆ ಎಂದು ಸಂತೋಷದಿಂದಿರು.
(೧೪) ಅನಭಿಷ್ವಂಗಃ ಪುತ್ರ ದಾರ ಗೃಹ ಆದಿಷು : ಅಭಿಷ್ವಂಗ ಎಂದರೆ ಅತಿಯಾಗಿ ಹಚ್ಚಿಕೊಳ್ಳುವುದು(Over attachment). ಮನೆ, ಹೆಂಡತಿ(ಗಂಡ/ಹೆಂಡತಿ) ಮಕ್ಕಳು ಇತ್ಯಾದಿಯನ್ನು ಅತಿಯಾಗಿ ಹಚ್ಚಿಕೊಳ್ಳಬೇಡ ಎನ್ನುತ್ತಾನೆ  ಕೃಷ್ಣ.  ಇಲ್ಲಿ ಮನೆ ಸಂಸಾರವನ್ನು ಹಚ್ಚಿಕೊಳ್ಳದೇ ಇರುವುದು ಎಂದರೆ ಎಲ್ಲವನ್ನೂ ತೊರೆದು ಕಾಡಿಗೆ ಹೋಗುವುದಲ್ಲ. ‘ಇದನ್ನು ಬಿಟ್ಟು ನಾನು ಇರಲಾರೆ’ ಎನ್ನುವ ಅಭಿಷ್ವಂಗ ಬಿಟ್ಟುಬಿಡುವುದು ಅಷ್ಟೆ. ಜೀವನದಲ್ಲಿ ಏನು ಬರುತ್ತದೋ ಅದನ್ನು ಸಾಕ್ಷೀಭೂತನಾಗಿ ನೋಡು. ಜೀವನವೇ ಒಂದು ನಾಟಕ, ಅದರಲ್ಲಿ ನೀನೇ ಪಾತ್ರಧಾರಿ , ನೀನೇ  ಪ್ರೇಕ್ಷಕ. ಭಗವಂತ ನಿರ್ದೇಶಕ. ಇಲ್ಲಿ ನನ್ನ ಮಕ್ಕಳೇ ನನ್ನ ಬದುಕು, ನನ್ನ ಪತಿ/ಪತ್ನಿ ನನ್ನ ಬದುಕು, ನನ್ನ ಸಂಪಾದನೆಯೇ ನನ್ನ ಬದುಕು, ಇದನ್ನು ಬಿಟ್ಟು ನನ್ನ ಅಸ್ತಿತ್ವವಿಲ್ಲ ಎನ್ನುವ ಅತಿಯಾದ ಅಭಿಷ್ವಂಗ ಬೇಡ. ಪ್ರೀತಿಸು-ಆದರೆ ಹಚ್ಚಿಕೊಂಡು ಕೊರಗಬೇಡ, ನಿರಾಶನಾಗಬೇಡ. ಈ ರೀತಿ ಬದುಕಲು ಕಲಿತಾಗ ಜೀವನ ಸುಂದರವಾಗಿರುತ್ತದೆ. ನಮ್ಮಿಂದ ನಮ್ಮ ಮಕ್ಕಳು ದೂರವಾದರೆ, ಹೆಂಡತಿ/ಗಂಡ ದೂರವಾದರೆ, ನಾವು ನಮ್ಮ ಸಂಪತ್ತನ್ನು(ಮನೆ, ಆಸ್ತಿ ಇತ್ಯಾದಿ) ಕಳೆದುಕೊಂಡರೆ ದುಃಖ-ನಿರಾಶೆಯಾಗುವುದಿಲ್ಲ. ಈ ರೀತಿ ಬದುಕಿದಾಗ  ಜೀವನದಲ್ಲಿ ಏನು ದುರಂತ ಬಂದರೂ ಅದು ನಮ್ಮ ಪಾಲಿನ ಪಾತ್ರಾಭಿನಯ ಎನ್ನುವ ಭಾವನೆಯಿಂದ ನಾವು ಅದನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ-ಆಘಾತವಾಗುವುದಿಲ್ಲ.
(೧೫) ನಿತ್ಯಮ್ ಚ ಸಮಚಿತ್ತತ್ವಮ್ ಇಷ್ಟ ಅನಿಷ್ಟ ಉಪಪತ್ತಿಷು : ಜೀವನದಲ್ಲಿ ಇಷ್ಟವಾದ ಘಟನೆ ನಡೆಯಬಹುದು, ಅನಿಷ್ಟವಾದ ಘಟನೆ ನಡೆಯಬಹುದು. ಇಷ್ಟ ಅನಿಷ್ಟಗಳು ಬಂದೊದಗಿದಾಗ ಮನಸ್ಸಿನ ಸಮತೋಲನವನ್ನು ಕಳೆದುಕೊಳ್ಳದೆ ಎಲ್ಲಾ ಸಮಯದಲ್ಲೂ ಸಮಚಿತ್ತತ್ವದಿಂದಿರಲು ಕಲಿ.  ನಾವು ಅನಿಷ್ಟ ಅಂದುಕೊಂಡಿದ್ದು ಅನಿಷ್ಟವಾಗಿರಬೇಕೆಂದಿಲ್ಲ ಅಥವಾ ನಾವು ಇಷ್ಟಪಟ್ಟದ್ದು ಒಳ್ಳೆಯದಾಗಿರಬೇಕೆಂದಿಲ್ಲ. ಆದ್ದರಿಂದ ಇಷ್ಟ-ಅನಿಷ್ಟ ಎಂದು ಲೇಪ ಹಚ್ಚದೆ ಬಂದಿದ್ದನ್ನು ‘ನಾಹಂ ಕರ್ತಾ ಹರಿಃ ಕರ್ತಾ’ ಎಂದು ಸ್ವೀಕರಿಸಲು ಕಲಿ. ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆ ಭಗವಂತ ನಮ್ಮ ತರಬೇತಿಗಾಗಿ ಸೃಷ್ಟಿಸಿರುವ ಪ್ರಾಯೋಗಿಕ(Practical)ಶಿಕ್ಷಣ. ಭಗವಂತ ನಮಗೆ ದುಃಖವನ್ನು ಕೊಟ್ಟು ನಮ್ಮನ್ನು ಜಾಣರನ್ನಾಗಿ ಮಾಡುತ್ತಾನೆ ಎನ್ನುವ ಸತ್ಯವನ್ನು ಅರಿತು ಬದುಕು.
(೧೬) ಮಯಿ ಚ ಅನನ್ಯಯೋಗೇನ ಭಕ್ತಿಃ ಅವ್ಯಭಿಚಾರಿಣೀ: ಭಗವಂತನಲ್ಲಿ ನಿರಂತರ ಪರಿಶುದ್ಧ ಭಕ್ತಿ  ಇರಲಿ. ಭಗವಂತ ಒಬ್ಬನೆ, ಆತನ ನಾಮ ಹಲವು. ಆತನಲ್ಲಿ ಅನನ್ಯವಾದ ಭಕ್ತಿಯನ್ನಿಡು. ಇಲ್ಲಿ ಏಕಭಕ್ತಿ ಬಹಳ ಮುಖ್ಯ. ಒಂದೊಂದು ದಿನ ಒಂದೊಂದು ದೇವರನ್ನು ಪೂಜಿಸುವುದು, ಒಂದು ದೇವತೆಯನ್ನು ಪೂಜಿಸಿದಾಗ ಇನ್ನೊಂದು ದೇವತೆ ಕೋಪಗೊಳ್ಳಬಹುದು ಎನ್ನುವ ಭಯದಿಂದ ಅನೇಕ ದೇವತಾ ಆರಾಧನೆ ಮಾಡುವುದನ್ನು  ಮಾಡಿದರೆ ಅದು ವ್ಯಭಿಚಾರವಾಗುತ್ತದೆ. ಆದ್ದರಿಂದ ಕೃಷ್ಣ ಇಲ್ಲಿ “ನಿನ್ನ ಭಕ್ತಿ ಅನನ್ಯವಾಗಿದ್ದು ಅವ್ಯಭಿಚಾರಿಣಿಯಾಗಿರಬೇಕು” ಎಂದು ಒತ್ತಿ ಹೇಳಿದ್ದಾನೆ. ಭಗವಂತ ಸರ್ವಸಮರ್ಥ, ಸರ್ವಶಕ್ತ, ಜಗತ್ಜನ್ಮಾದಿ ಕಾರಣ ಎನ್ನುವ ನಿಷ್ಠೆ ನಿನ್ನಲ್ಲಿರಲಿ. ದೇವರ ಮೇಲೆ ನಂಬಿಕೆ ಇಲ್ಲದೆ ಯಾವ ಶಾಸ್ತ್ರ ಓದಿ ಏನೂ ಉಪಯೋಗವಿಲ್ಲ. ಭಗವಂತನ ಮೇಲಿನ ಪೂರ್ಣ ನಂಬಿಕೆಯಿಂದ ಮಾತ್ರ ಜ್ಞಾನ ಸಾಧನೆ ಸಾಧ್ಯ
(೧೭) ವಿವಿಕ್ತ ದೇಶ ಸೇವಿತ್ವಮ್: ಸಾಧ್ಯವಾದಷ್ಟು ಅತಿ ಹೆಚ್ಚು ಸಾತ್ವಿಕ ಕಂಪನವಿರುವ ಕಡೆ, ಸಾತ್ವಿಕ ಜನರ ಜೊತೆಗೆ ವಾಸ ಮಾಡಲು ಪ್ರಯತ್ನಿಸು. ಪೂರ್ಣಪ್ರಮಾಣದಲ್ಲಿ ಅಖಂಡವಾದ ಸಾತ್ವಿಕ ಕಂಪನವಿರುವ ಸ್ಥಳ  ಪುಣ್ಯಕ್ಷೇತ್ರವೆನಿಸುತ್ತದೆ. ಅಂತಹ ಸ್ಥಳದಲ್ಲಿ ಒಳ್ಳೆಯದನ್ನು ಮಾತನಾಡುವ, ಒಳ್ಳೆಯ ಚಿಂತನೆ ಮಾಡುವ ಸಜ್ಜನರೊಂದಿಗೆ ವಾಸಮಾಡು. ಇದು ಸಾಧ್ಯವಾಗದೇ ಇದ್ದಲ್ಲಿ ಆದಷ್ಟು ಏಕಾಂತವಾಸವನ್ನು ಅಭ್ಯಾಸ ಮಾಡು. ನಾಲ್ಕು ಜನರೊಂದಿಗೆ ಸೇರಿ ಹಾಳು ಹರಟೆಯಲ್ಲಿ ನಿನ್ನ ಅಮೂಲ್ಯವಾದ ಜನ್ಮವನ್ನು ವ್ಯರ್ಥ ಮಾಡಿಕೊಳ್ಳಬೇಡ.   
(೧೮) ಅರತಿಃ ಜನ ಸಂಸದಿ: ಎಲ್ಲಿ ಬೇಡವಾದ ವಿಚಾರಕ್ಕಾಗಿ ಜನಜಂಗುಳಿ ಸೇರುತ್ತದೋ, ಅಂತಹ ಜನಜಂಗುಳಿಯಿಂದ ದೂರವಿರು.
(೧೯) ಅಧ್ಯಾತ್ಮ ಜ್ಞಾನ ನಿತ್ಯತ್ವಮ್ : ಅಧ್ಯಾತ್ಮದ ಅರಿವಿನಲ್ಲಿ ನಿರಂತರವಾಗಿರು. ಮೊದಲು ಪಿಂಡಾಂಡ-ಬ್ರಹ್ಮಾಂಡವನ್ನು ತಿಳಿಆನಂತರ ಇದನ್ನು ತಿಳಿಯುವ ಅಪೂರ್ವ ಮನಸ್ಸಿನ ವಿಸ್ಮಯದ ಬಗ್ಗೆ ತಿಳಿನಂತರ ‘ನಾನು’ ಎಂದರೆ ಏನು(Awareness of self) ಎನ್ನುವುದನ್ನು ತಿಳಿ. ಇದು ತಿಳಿದಮೇಲೆ ಈ ಆತ್ಮವನ್ನು ನಿಯಂತ್ರಿಸುವ ಪರಮಾತ್ಮನನ್ನು ತಿಳಿ. ಇದು ಅಧ್ಯಾತ್ಮಜ್ಞಾನ. ನಿನ್ನ ಅಧ್ಯಯನದ ಗುರಿ ಅಧ್ಯಾತ್ಮ ಜ್ಞಾನವಾಗಿರಲಿ.  

(೨೦) ತತ್ತ್ವಜ್ಞಾನ ಅರ್ಥ ದರ್ಶನಮ್: ಜಗತ್ತಿನ ಮೂಲಭೂತ ಸತ್ಯ ತಿಳಿಯುವುದಕ್ಕೆ ನಿನ್ನ ಅಧ್ಯಯನ ಮೀಸಲಿರಲಿ. ಮೇಲಿನ ಎಲ್ಲಾ ಗುಣಗಳಿಂದ ಎಲ್ಲಾ ಶಾಸ್ತ್ರಗಳಿಗೆ ವಿಷಯಭೂತನಾದ, ಎಲ್ಲಾ ಶಾಸ್ತ್ರಗಳಿಂದ ಪ್ರತಿಪಾಧ್ಯನಾದ ಭಗವಂತನ ಸಾಕ್ಷಾತ್ಕಾರ ಪಡೆ.

ಇಲ್ಲಿ ಹೇಳಿರುವ ಗುಣಗಳೇ ಜ್ಞಾನ ಮತ್ತು ಜ್ಞಾನ ಸಾಧನಗಳು. ಇದಕ್ಕಿಂತ ಬೇರೆಯಾಗಿರುವುದು ಅಜ್ಞಾನ ಮತ್ತು ಅಜ್ಞಾನದ ಗುರಿ.
(Contributed by Shri Prakash Shetty)

*****